ತಿರುವನಂತಪುರ (ಪಿಟಿಐ): ಇರಾಕ್ನಲ್ಲಿ ಉಗ್ರರ ವಶಕ್ಕೆ ಸಿಲುಕಿದ್ದ ಭಾರತದ ದಾದಿಯರ ಸುರಕ್ಷಿತ ಬಿಡುಗಡೆಗೆ ಶ್ರಮಿಸಿದಕ್ಕಾಗಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಶನಿವಾರ ಕೃತಜ್ಞತೆ ಸಲ್ಲಿಸಿದ್ದಾರೆ.
ಶನಿವಾರ ಆತಂಕದಿಂದ ಹೊರಬಂದಂತೆ ಕಂಡು ಬಂದ ಚಾಂಡಿ ಅವರು, ದಾದಿಯರ ಬಿಡುಗಡೆ ಪ್ರಕರಣ ಸುಖಾಂತ್ಯ ತಲುಪಿಸಲು ಶ್ರಮಿಸಿದ ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
‘ಕೇರಳದ ಆಂತಕವನ್ನು ಸಂಪೂರ್ಣವಾಗಿ ಅರಿತು ಕೇಂದ್ರ ಸರ್ಕಾರ ಕೆಲಸ ಮಾಡಿತು. ದಾದಿಯರ ಬಿಡುಗಡೆಗಾಗಿ ವಿದೇಶಾಂಗ ಇಲಾಖೆ ಹಾಗೂ ಇರಾಕ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪ್ರಾಮಾಣಿಕ ಯತ್ನ ಮಾಡಿವೆ’ ಎಂದು ಶನಿವಾರ ಬೆಳಿಗ್ಗೆ ಚಾಂಡಿ ಸುದ್ದಿಗಾರರಿಗೆ ತಿಳಿಸಿದರು.
ದಾದಿಯರ ಬಿಡುಗಡೆಗೆ ಚಾಂಡಿ ನಡೆಸಿದ ಹರಸಾಹಸವನ್ನು ಕೇರಳದಲ್ಲಿರುವ ಪ್ರತಿಪಕ್ಷಗಳು ಕೂಡ ಕೊಂಡಾಡಿವೆ.
ಇರಾಕ್ನಲ್ಲಿ ಸಿಲುಕಿದ್ದ 46 ದಾದಿಯರ ಸುರಕ್ಷಿತ ಬಿಡುಗಡೆಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಚಾಂಡಿ ಅವರು ಎರಡು ದಿನಗಳ ಕಾಲ ನವದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.