ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸುವ ಸಮಯ ಬಂದಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. ಆದರೆ ವಿವಾದಾತ್ಮಕ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ಇದು ಅವರ ‘ವೈಯಕ್ತಿಕ ಅಭಿಪ್ರಾಯ’ ಎಂದು ಪ್ರತಿಕ್ರಿಯಿಸಿದೆ.
‘ಯುವಜನರಿಗೆ ಪಕ್ಷವನ್ನು ಮುನ್ನಡೆಸಲು ಕಾಂಗ್ರೆಸ್ ಪಕ್ಷವು ಯಾವಾಗಲೂ ಪ್ರೋತ್ಸಾಹಿಸಿದೆ ಎಂಬುದು ಕಾರ್ಯಕರ್ತರ ಸಾಮಾನ್ಯ ಭಾವನೆ. ಆದ್ದರಿಂದ ರಾಹುಲ್ ಗಾಂಧಿ ಅವರು ಪಕ್ಷದ ನೇತೃತ್ವ ವಹಿಸುವ ಸಮಯ ಬಂದಿದೆ ಎಂದು ನನಗೆನಿಸುತ್ತದೆ’ ಎಂದು ದಿಗ್ವಿಜಯ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತ್ತೀಚಿನ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆಗಳ ಚುನಾವಣೆಯಲ್ಲಿನ ಸೋಲುಗಳ ಬಗೆಗಿನ ಪ್ರಶ್ನೆಗೆ ದಿಗ್ವಿಜಯ್, 2004 ರಿಂದ 2014ರ ನಡುವಣ ಗೆಲುವುಗಳನ್ನೂ ಪರಿಗಣಿಸಬೇಕು ಎಂದು ಉತ್ತರಿಸಿದ್ದಾರೆ.
‘ನನ್ನ ಹಿಂದಿನ ಹೇಳಿಕೆಯನ್ನು ನೆನಪಿಸಿಕೊಳ್ಳಲಿ. ಮೋದಿ ಅವರಂತೆ ರಾಹುಲ್ ಗಾಂಧಿ ಅವರು ಅಧಿಕಾರಕ್ಕಾಗಿ ಹಪಹಪಿಸಲ್ಲ. ಮೋದಿ ಅವರು ಅಧಿಕಾರ ಇಲ್ಲದೇ ಮೋದಿ ಉಸಿರಾಡುವುದೂ ಇಲ್ಲ ಮತ್ತು ಬದುಕುವುದೂ ಇಲ್ಲ ಎಂದು ನಾನು ಹೇಳಿದ್ದೆ’ ಎಂದು ತಮ್ಮ ಹೇಳಿಕೆಯನ್ನು ಜ್ಞಾಪಿಸಿದ್ದಾರೆ.
ಕಾಂಗ್ರೆಸ್ ಅಂತರ: ದಿಗ್ವಿಜಯ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ‘ದಿಗ್ವಿಜಯ್ ಅವರು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷ ಸಂಘಟನೆ ಅಥವಾ ದೇಶದ ಹಿತಾಸಕ್ತಿ ವಿಷಯಕ್ಕೆ ಬಂದಾಗ ಕಾಂಗ್ರೆಸ್ ಪಕ್ಷವು ಯಾವಾಗಲೂ ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಪಕ್ಷದ ವಕ್ತಾರ ಆನಂದ್ ಶರ್ಮಾ ಅವರು ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರು ಪಕ್ಷದ ದೊಡ್ಡ ಸ್ಫೂರ್ತಿ ಎಂದಿರುವ ಶರ್ಮಾ, ‘ರಾಹುಲ್ ಅವರೂ ಪಕ್ಷದ ಉತ್ಸಾಹ ಹಾಗೂ ಪಕ್ಷದ ಭವಿಷ್ಯ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.