ನವದೆಹಲಿ: ‘ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರನ್ನು ಜೈಷ್–ಎ–ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹೆಚ್ಚಾಗಿ ಪ್ರೀತಿಸುತ್ತಿದ್ದು, ಅವರನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲಿ’ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಗಿರಿರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ.
‘ಪಾಕಿಸ್ತಾನ ಸರ್ಕಾರದ ಬಂಬಲ ಹೊಂದಿರುವ, ಉಗ್ರ ಸಂಘಟನೆ ಮುಖ್ಯಸ್ಥ ಅಜರ್, ರೋಹಿಂಗ್ಯಾಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಪಾಕಿಸ್ತಾನ ಸರ್ಕಾರ ರೋಹಿಂಗ್ಯಾಗಳನ್ನು ಕರೆದುಕೊಂಡು ಹೋಗಲಿ’ ಎಂದರು.
ಪಾಕಿಸ್ತಾನ ಪ್ರಾಯೋಜಿತ ಉಗ್ರರ ಚಟುವಟಿಕೆ ಹಾಗೂ ಗಡಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ ಕುರಿತು ಪ್ರಸ್ತಾಪಿಸಿದ ಅವರು, ನುಸುಳುಕೋರರನ್ನು ಇಟ್ಟುಕೊಳ್ಳಲು ಭಾರತ ಸಿದ್ಧವಿಲ್ಲ. ರೋಹಿಂಗ್ಯಾಗಳು ಕೂಡಲೇ ದೇಶವನ್ನು ತೊರೆಯಬೇಕು ಎಂದರು.
ರೋಹಿಂಗ್ಯಾಗಳು ಅಕ್ರಮ ವಲಸಿಗರಾಗಿದ್ದು, ದೇಶದ ಆಂತರಿಕ ಭದ್ರತೆಗೆ ಧಕ್ಕೆ ಒಡ್ಡುವವರಾಗಿದ್ದಾರೆ ಎಂಬ ಸರ್ಕಾರದ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಕಾನೂನಿಗಿಂತ ಮಾನವೀಯತೆ ದೊಡ್ಡದಲ್ಲ ಎಂದು ಹೇಳಿದ್ದಾರೆ. ರೋಹಿಂಗ್ಯಾಗಳು ಉಗ್ರರ ಜೊತೆಗೆ ನಂಟು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಸಹ ಸುಪ್ರೀಂ ಕೋರ್ಟ್ಗೆ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.