ADVERTISEMENT

ಲಲಿತ್‌ ಮೋದಿ ಪ್ರಕರಣ: ಮೌನ ಮುರಿದ ಸುಷ್ಮಾ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 9:26 IST
Last Updated 3 ಆಗಸ್ಟ್ 2015, 9:26 IST

ನವದೆಹಲಿ (ಪಿಟಿಐ): ಲಲಿತ್‌ ಮೋದಿ ಪ್ರಕರಣ ಕುರಿತಂತೆ ಮೌನ ಮುರಿದಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌, ‘ಲಲಿತ್‌ ಮೋದಿಗೆ ಪ್ರವಾಸ ದಾಖಲೆ ನೀಡುವಂತೆ ನಾನು ಬ್ರಿಟಿಷ್‌ ಸರ್ಕಾರಕ್ಕೆ ಮನವಿ ಮಾಡಿರಲಿಲ್ಲ’ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಆರೋಪಕ್ಕೆ ರಾಜ್ಯಸಭೆಯಲ್ಲಿ ಸೋಮವಾರ ಉತ್ತರಿಸಿದ ಸುಷ್ಮಾ ತಮ್ಮ ವಿರುದ್ಧದ ಆರೋಪಗಳೆಲ್ಲವೂ ನಿರಾಧಾರ ಎಂದು ಹೇಳಿದ್ದಾರೆ.

ಲಲಿತ್‌ ಮೋದಿ ಪ್ರಕರಣ ಹಾಗೂ ವ್ಯಾಪಂ ಹಗರಣದ ಬಗ್ಗೆ ಕಾಂಗ್ರೆಸ್‌ ಸದಸ್ಯರ ಗದ್ದಲ ತೀವ್ರಗೊಂಡಿದ್ದರಿಂದ ಸುಷ್ಮಾ ತಮ್ಮ ಹೇಳಿಕೆಯನ್ನು ಪೂರ್ಣಗೊಳಿಸಲಾಗಲಿಲ್ಲ.

ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲ ಹೆಚ್ಚಾಗಿದ್ದರಿಂದ ರಾಜ್ಯಸಭೆಯ ಉಪ ಸಭಾಪತಿ ಪಿ.ಜೆ. ಕುರಿಯನ್‌ ಅವರು ಕಲಾಪವನ್ನು ಮುಂದೂಡಿದರು.

ADVERTISEMENT

ಇದಕ್ಕೂ ಮೊದಲು ಮಾತನಾಡಿದ ಕಾಂಗ್ರೆಸ್‌ ಸಂಸದ ಆನಂದ ಶರ್ಮಾ, ‘ಕೇಂದ್ರ ಸಚಿವರ ವಿರುದ್ಧದ ಆರೋಪಗಳು ಹಾಗೂ ಹಗರಣಗಳ ಬಗ್ಗೆ ಪ್ರಧಾನಮಂತ್ರಿಯವರೇ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

ಸುಷ್ಮಾ ಸ್ವರಾಜ್‌ ಅವರು ತಮ್ಮ ವಿರುದ್ಧ ಆರೋಪಗಳನ್ನು ಅಲ್ಲಗಳೆಯುತ್ತಿದ್ದಂತೆ ಸದನದ ಬಾವಿಗಿಳಿದ ಪ್ರತಿಪಕ್ಷ ಸದಸ್ಯರು ಲಲಿತ್‌ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಷ್ಮಾ ಸ್ವರಾಜ್‌ ಮತ್ತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ವ್ಯಾಪಂ ಹಗರಣದ ಹೊಣೆ ಹೊತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವಾಣ್‌ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.