ಎಟಾ, ಉತ್ತರಪ್ರದೇಶ : ಶಾಲಾ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ 19 ಮಕ್ಕಳು ಮೃತಪಟ್ಟು, 30ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಇಲ್ಲಿನ ಅಲಿಗಂಜ್–ಪಲಿಯಾಲಿ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಲಾರಿ ಚಾಲಕನೂ ಮೃತಪಟ್ಟಿದ್ದು, ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಶಾಲಾ ಬಸ್ ಇಲ್ಲಿನ ಜೆ.ಎಸ್. ವಿದ್ಯಾನಿಕೇತನ್ಗೆ ಸೇರಿದ್ದು.
ತೀವ್ರ ಚಳಿಯ ಕಾರಣ ಜಿಲ್ಲಾಧಿಕಾರಿ ಅವರು ಶಾಲೆಗಳಿಗೆ ರಜೆ ಘೋಷಿಸುವಂತೆ ಆದೇಶಿಸಿದ್ದರು. ಆದರೆ, ಜೆ.ಎಸ್. ವಿದ್ಯಾನಿಕೇತನ್ ಸಂಸ್ಥೆ ಜಿಲ್ಲಾಧಿಕಾರಿ ಆದೇಶ ಮೀರಿ ಶಾಲೆ ತೆರೆದಿತ್ತು.
ಅಪಘಾತದಲ್ಲಿ ಮೃತಪಟ್ಟವರು 5ರಿಂದ 15 ವರ್ಷದ ಒಳಗಿನವರು. ಸಂಖ್ಯೆ ಇನ್ನಷ್ಟೂ ಏರುವ ಸಾಧ್ಯತೆ ಇದೆ. ಘಟನೆ ಕಾರಣ ಶಾಲೆಯ ಮಾನ್ಯತೆಯನ್ನು ರದ್ದು ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಾಲೆಯ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದ್ದು, ವ್ಯವಸ್ಥಾಪಕ ತಲೆಮೆರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.