ಹೈದರಾಬಾದ್ (ಪಿಟಿಐ): ಸತ್ಯಂ ಕಂಪ್ಯೂಟರ್ ಸರ್ವೀಸ್ ಲಿಮಿಟೆಡ್ ಕಂಪೆನಿಯ ಬಹುಕೋಟಿ ಹಗರಣ ಪ್ರಕರಣದ ತೀರ್ಪನ್ನು 2015ರ ಮಾರ್ಚ್ 9ಕ್ಕೆ ನಿಗದಿ ಪಡಿಸಿ ಸ್ಥಳೀಯ ನ್ಯಾಯಾಲಯವು ಆದೇಶಿಸಿದೆ.
ಹಲವು ಸಂಪುಟಗಳಷ್ಟಿರುವ ದಾಖಲೆಗಳನ್ನು ಉದ್ಧರಿಸಿದ ವಿಶೇಷ ನ್ಯಾಯಾಧೀಶ ಬಿ.ವಿ.ಎಲ್.ಎನ್ ಚಕ್ರವರ್ತಿ, ತೀರ್ಪನ್ನು ಮುಂಬರುವ ಮಾರ್ಚ್ 9 ರಂದು ಪ್ರಕಟಿಸುವುದಾಗಿ ಘೋಷಿಸಿದರು.
‘ಪ್ರಕರಣ ಗಾತ್ರ ನಿಮಗೆ ತಿಳಿಯದೇ ಇಲ್ಲ. ಇದರ ಪರಿಶೀಲನೆಗೆ ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ. ಇದರಿಂದ ನಿಮಗೆ ತೃಪ್ತಿಯಾಗಬಹುದು ಅಥವಾ ಆಗದೇಯೂ ಇರಬಹುದು.ಆದರೆ ನನಗೆ ತೃಪ್ತಿಯಾಗಲೇಬೇಕು. ತೀರ್ಪನ್ನು ಸಿದ್ಧಪಡಿಸಲು 23 ವಾರಗಳ ಕಾಲಾವಕಾಶ ಹಿಡಿಯುತ್ತದೆ’ ಎಂದು ಪ್ರಕರಣ ಸಂಬಂಧದ ವಾದಿ ಹಾಗೂ ಪ್ರತಿವಾದಿ ಪರ ವಕೀಲರಿಗೆ ಅವರು ಹೇಳಿದರು.
‘ಸತ್ಯಂ ಹಗರಣದ ತೀರ್ಪನ್ನು ನ್ಯಾಯಾಧೀಶರು ಮಾರ್ಚ್ 9ಕ್ಕೆ ನಿಗದಿಪಡಿಸಿದ್ದಾರೆ’ ಎಂದು ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಸುರೆಂದರ್ ಅವರು ತಿಳಿಸಿದ್ದಾರೆ.
ಕಳೆದ ಆರು ವರ್ಷಗಳ ಹಿಂದೆ ಪ್ರಕರಣದ ವಿಚಾರಣೆ ಆರಂಭಗೊಂಡಿತ್ತು. ಈ ಸುದೀರ್ಘ ಅವಧಿಯಲ್ಲಿ ಸುಮಾರು 3 ಸಾವಿರ ದಾಖಲೆಗಳನ್ನು ಹಾಗೂ 226 ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.