ADVERTISEMENT

ಸಾಮೂಹಿಕ ಅತ್ಯಾಚಾರವೆಸಗಿ ಮತಾಂತರಕ್ಕೆ ಒತ್ತಾಯ: ದೂರು ದಾಖಲು

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 11:06 IST
Last Updated 19 ಸೆಪ್ಟೆಂಬರ್ 2017, 11:06 IST
ಸಾಮೂಹಿಕ ಅತ್ಯಾಚಾರವೆಸಗಿ ಮತಾಂತರಕ್ಕೆ ಒತ್ತಾಯ: ದೂರು ದಾಖಲು
ಸಾಮೂಹಿಕ ಅತ್ಯಾಚಾರವೆಸಗಿ ಮತಾಂತರಕ್ಕೆ ಒತ್ತಾಯ: ದೂರು ದಾಖಲು   

ಮುಜಾಫರ್‌ನಗರ: ನಾಲ್ವರು ಯುವಕರು ತನ್ನ ಮೇಲೆ ಹತ್ತುದಿನಗಳ ಕಾಲ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಾಂಸ ತಿನ್ನುವಂತೆ ಒತ್ತಾಯಿಸಿ ಮತಾಂತರವಾಗುವಂತೆ ಬಲವಂತ ಮಾಡಿದ್ದಾರೆ ಎಂದು ಆರೋಪಿಸಿ 16 ವರ್ಷದ ಬಾಲಕಿ ಇಲ್ಲಿನ ಭೋಪಾ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಪೊಲೀಸ್‌ ಅಧಿಕಾರಿ ಮೊಹಮದ್‌ ರಿಜ್ವಾನ್‌ ಅವರು, ‘ಅಕ್ರಮ್‌, ಆಸ್ಲಾಮ್‌, ಆಯೂಬ್‌ ಹಾಗೂ ಸಲೀಂ ಎಂಬ ನಾಲ್ವರು ಯುವಕರು 10 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಬಾಲಕಿ ದೂರು ನೀಡಿದ್ದಾಳೆ’ ಎಂದು ಹೇಳಿದ್ದಾರೆ.

ಪೊಲೀಸರಿಗೆ ನೀಡಿರುವ ದೂರಿನಲ್ಲಿ, ‘ಹೊಸ ಮಂಡಿ ಪ್ರದೇಶದ ಕುರ್ಕಾ ಗ್ರಾಮದಲ್ಲಿ ಚಿಕ್ಕಪ್ಪನ ಮನೆಯಿದೆ. ಅವರನ್ನು ಭೇಟಿ ಮಾಡಿ ಸೆಪ್ಟೆಂಬರ್‌ 6ರಂದು ಮುಜಾಫರ್‌ನಗರಕ್ಕೆ ಹೊರಟಿದ್ದೆ. ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಅದೇ ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದ ನಾಲ್ವರು ನನ್ನನ್ನು ಅಲ್ಲಿಗೆ ಬಿಟ್ಟುಕೊಡುವುದಾಗಿ ಹೇಳಿದರು. ಅದರಂತೆ ಕಾರಿಗೆ ಹತ್ತಿದೆ’

ADVERTISEMENT

‘ಕಾರು ಹತ್ತಿದ ತಕ್ಷಣ ಪಿಸ್ತೂಲ್‌ ತೋರಿಸಿ ಹೆದರಿಸಿ, ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿದರು. ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ನಿರಂತರ ಅತ್ಯಾಚಾರವೆಸಗಿದರು. ಸೆಪ್ಟೆಂಬರ್‌ 16ರಂದು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿ ಗಂಗಾ ಚಾನಲ್‌ ಮೇಲ್ಸೇತುವೆ ಬಳಿಯಿರುವ ಹಳ್ಳಿಯೊಂದರ ಸಮೀಪ ಬಿಟ್ಟುಹೋದರು’ ಎಂದು ತಿಳಿಸಿದ್ದಾಳೆ.

ಈ ಬಗ್ಗೆ ಪೋಷಕರಿಗೆ ಹೇಳಿದ ಮೇಲೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕೆಲ ಹಿಂದೂ ಧರ್ಮದ ಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಪೊಲೀಸ್‌ ಠಾಣೆಗೆ ಭೇಟಿ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.