ADVERTISEMENT

ಸಿಆರ್‌ಪಿಎಫ್‌ ಯೋಧನ ಬಂಧನ

ಪಿಟಿಐ
Published 21 ಮಾರ್ಚ್ 2018, 19:40 IST
Last Updated 21 ಮಾರ್ಚ್ 2018, 19:40 IST
ಭಗ್ನಗೊಂಡ ಪೆರಿಯಾರ್‌ ಪ್ರತಿಮೆ
ಭಗ್ನಗೊಂಡ ಪೆರಿಯಾರ್‌ ಪ್ರತಿಮೆ   

ಚೆನ್ನೈ: ಸಮಾಜ ಸುಧಾರಕ ಪೆರಿಯಾರ್‌ ಪ್ರತಿಮೆ ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್‌ ಯೋಧನನ್ನು ಬಂಧಿಸಲಾಗಿದೆ.

ಬಂಧಿತ ‌ಯೋಧ ಸೆಂಥಿಲ್‌ ಕುಮಾರ್‌ ಚಂಡಿಗಡದಲ್ಲಿ ಕರ್ತವ್ಯದಲ್ಲಿದ್ದು, ಸ್ವಗ್ರಾಮಕ್ಕೆ ಬಂದಾಗ ಈ ಕೃತ್ಯ ಎಸಗಿದ್ದಾನೆ.

ಘಟನೆ ನಡೆದ ಸ್ಥಳದಲ್ಲಿದ್ದ ಸಿ.ಸಿ. ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಕುಮಾರ್ ಪ್ರತಿಮೆ ಭಗ್ನಗೊಳಿಸಿರುವುದು ಗೊತ್ತಾಗಿದೆ.

ADVERTISEMENT

ತನ್ನ ಮನೆಯ ಪಕ್ಕ 2013ರಲ್ಲಿ ಪೆರಿಯಾರ್‌ ಪ್ರತಿಮೆ ಪ್ರತಿಷ್ಠಾಪನೆ ಮಾಡುತ್ತಿರುವುದಕ್ಕೆ ಕುಮಾರ್‌ ವಿರೋಧ ವ್ಯಕ್ತಪಡಿಸಿದ್ದ ಮತ್ತು ಅದರನ್ನು ಭಗ್ನಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ತಿಳಿಸಿದ್ದಾರೆ.

ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆತ (ಕೊಯಮತ್ತೂರು ವರದಿ): ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಆರ್.ನಂದಕುಮಾರ್ ಅವರ ಮನೆಯ ಮೇಲೆ ಮಂಗಳವಾರ ರಾತ್ರಿ 3 ಗಂಟೆ ಸುಮಾರಿಗೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುದುಕೊಟ್ಟೈ ಜಿಲ್ಲೆಯಲ್ಲಿ ಪೆರಿಯಾರ್ ಪ್ರತಿಮೆ ಧ್ವಂಸವಾದ ಮರುದಿನವೇ ಈ ಘಟನೆ ನಡೆದಿದೆ.

ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಎಚ್.ರಾಜಾ ಅವರು ಪೆರಿಯಾರ್ ಕುರಿತು ಹೇಳಿಕೆ ನೀಡಿದ ನಂತರ, ಇದೇ 17ರಂದು ಪಕ್ಷದ ಕಚೇರಿ ಮೇಲೆ ಎರಡು ಬಾರಿ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು.

ಯಾತ್ರೆಗೆ ವಿರೋಧ?: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜನ ಬೆಂಬಲ ಸಂಗ್ರಹಿಸುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಆರಂಭಿಸಿದ ‘ರಾಮ ರಾಜ್ಯ ರಥ ಯಾತ್ರೆ’ ಮಂಗಳವಾರ ತಿರುನೆಲ್ವೇಲಿಗೆ ತಲು‍ಪಿದೆ. ‘ಯಾತ್ರೆಯನ್ನು ಖಂಡಿಸಿ ಪೆಟ್ರೋಲ್ ಬಾಂಬ್ ಎಸೆದಿರುವ ಸಾಧ್ಯತೆಯೂ ಇದೆ’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.