ಚಾಪ್ರಾ/ಬಿಹಾರ್ (ಪಿಟಿಐ): ಪಾಟ್ನಾದಿಂದ 75 ಕಿ.ಮೀ ದೂರದಲ್ಲಿರುವ ಗೋಲ್ಡನ್ ಗಂಜ್ ಬಳಿ ದೆಹಲಿ–ದಿಬ್ರುಗಡ ರಾಜಧಾನಿ ಎಕ್ಸ್ಪ್ರಸ್ ರೈಲು ಬುಧವಾರ ಬೆಳಗಿನ ಜಾವ ಹಳಿ ತಪ್ಪಿದ್ದು 12 ಬೋಗಿಗಳು ನೆಲಕ್ಕುರುಳಿವೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು 8 ಜನರಿಗೆ ಗಂಭೀರ ಗಾಯಗಳಾಗಿವೆ.
‘ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಈ ಘಟನೆ ನಡೆದ ಸ್ಥಳದಲ್ಲಿ ಮೂರು ಟೈಂ ಬಾಂಬ್ಗಳು ಪತ್ತೆಯಾಗಿದ್ದು, ನಕ್ಸಲರ ಕೃತ್ಯ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರಿಗೆ ₨2 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ₨1 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ರೈಲ್ವೆ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಇದೊಂದು ಯೋಜಿತ ವಿಧ್ವಂಸಕ ಕೃತ್ಯ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೈಲ್ವೆ ಹಳಿಯಲ್ಲಿ ಭಾರಿ ಸ್ಫೊಟದ ಶಬ್ದ ಕೇಳಿಸಿತು, ಅದರ ಬೆನ್ನಿಗೇ ಬೋಗಿಗಳು ಒಂದೊಂದಾಗಿ ಹಳಿ ತಪ್ಪಿದವು’ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಅರುಣೇಂದ್ರ ಕುಮಾರ್ ಹೇಳಿದ್ದಾರೆ.
ರೈಲ್ವೆ ಸಚಿವ ಸದಾನಂದ ಗೌಡ ಈ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.