ಲಖನೌ: ಕಾವಲುರಹಿತ ಕ್ರಾಸಿಂಗ್ನಲ್ಲಿ ಚಲಿಸುತ್ತಿದ್ದ ರೈಲಿಗೆ ಶಾಲಾ ವಾಹನವೊಂದು ಡಿಕ್ಕಿ ಹೊಡೆದು 13 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 6.50ರ ವೇಳೆಗೆ ನಡೆದಿದೆ.
ದುಧಿ ರೈಲು ನಿಲ್ದಾಣದ ಸಮೀಪ ಬೆಹಪುರ್ವಾ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ವಾಹನದಲ್ಲಿ 20 ಮಕ್ಕಳಿದ್ದರು. ಈ ಪೈಕಿ 13 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.
‘ವಾಹನದ ಚಾಲಕ ಸ್ಥಳೀಯ ಡಿವೈನ್ ಪಬ್ಲಿಕ್ ಸ್ಕೂಲ್ಗೆ ಸೇರಿದವನು. ಅಪ್ರಾಪ್ತ ವಯಸ್ಸಿನ ಈ ಚಾಲಕನು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡಿದ್ದ. ರೈಲು ಬರುತ್ತಿರುವ ಶಬ್ದ ಕೇಳಿಸದ ಕಾರಣ ಅಪಘಾತ ಸಂಭವಿಸಿದೆ’ ಎಂದು ಅವರು ವಿವರಿಸಿದರು.
‘ರೈಲು ಬರುತ್ತಿರುವುದನ್ನು ಗಮನಿಸಿದ್ದ ಮಕ್ಕಳು ಕಿರುಚಿ ಚಾಲಕನನ್ನು ಎಚ್ಚರಿಸಿದ್ದರು, ಇಯರ್ಫೋನ್ನಿಂದ ಆತನಿಗೆ ಕೇಳಿಸಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
₹2ಲಕ್ಷ ಪರಿಹಾರ: ಘಟನೆ ತಿಳಿಯುತ್ತಿದ್ದಂತೆಯೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಮೃತ ಮಕ್ಕಳ ಕುಟುಂಬ ವರ್ಗದವರಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದರು.
‘ಹಳೆ ಗೂಡ್ಸ್ ವಾಹನವನ್ನೇ ಶಾಲಾ ವಾಹನವನ್ನಾಗಿ ಪರಿವರ್ತಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.ಅಪಘಾತದ ಕುರಿತಂತೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ, ಮಕ್ಕಳ ಸಂಬಂಧಿಕರಿಗೆ ₹2 ಲಕ್ಷ, ಗಂಭೀರ ಗಾಯಗೊಂಡವರಿಗೆ ₹1ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.
**
2020ರ ಮಾರ್ಚ್ 31ರ ಒಳಗಾಗಿ ದೇಶದಲ್ಲಿರುವ ಎಲ್ಲ ಕಾವಲುರಹಿತ ರೈಲ್ವೆ ಕ್ರಾಸಿಂಗ್ನ್ನು ತೆಗೆದುಹಾಕಲು ಪ್ರಯತ್ನಿಸಲಾಗುವುದು.
–ಅಶ್ವನಿ ಲೊಹಾನಿ, ರೈಲ್ವೆ ಮಂಡಳಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.