ನವದೆಹಲಿ (ಪಿಟಿಐ): 2ಜಿ ಹಗರಣದ ಭಾಗವಾದ ಏರ್ಸೆಲ್–ಮ್ಯಾಕ್ಸಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್, ಸಹೋದರ ಕಲಾನಿಧಿ ಮಾರನ್ ಸೇರಿದಂತೆ ಇತರೆ ಆರು ಮಂದಿ ಆರೋಪಿಗಳಿಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ಮಲೇಷ್ಯಾ ಮೂಲದ ಉದ್ಯಮಿ ಟಿ. ಆನಂದ ಕೃಷ್ಣನ್, ಅಗಸ್ಟಸ್ ರಾಲ್ಫ್ ಮಾರ್ಷಲ್ ಕೂಡ ಸಮನ್ಸ್ ಪಡೆದುಕೊಂಡವರ ಪಟ್ಟಿಯಲ್ಲಿದ್ದಾರೆ. ವಿಶೇಷ ಸಿಬಿಐ ನ್ಯಾಯಮೂರ್ತಿ ಒ.ಪಿ. ಸೈನಿ ಅವರು ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಕಂಪೆನಿಗಳ ಎಂಟು ಮಂದಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದರು.
‘ತಮ್ಮ ಕಕ್ಷಿದಾರರು ಬೇರೆ ಬೇರೆ ದೇಶಗಳಲ್ಲಿ ವಾಸವಾಗಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಕನಿಷ್ಠ ನಾಲ್ಕು ತಿಂಗಳಾದರೂ ಕಾಲಾವಕಾಶ ನೀಡಬೇಕು’ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯ 2015ರ ಮಾರ್ಚ್ 2ರ ಒಳಗಾಗಿ ಹಾಜರು ಪಡಿಸುವಂತೆ ಸೂಚಿಸಿದರು.
ಸಿಬಿಐ ಈ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಐಪಿಸಿ 120 ಕಲಂನಡಿ ಆರೋಪ ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.