ADVERTISEMENT

ಹಾದಿಯಾ ಮದುವೆಯ ತನಿಖೆ ಬೇಡ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಹಾದಿಯಾ ಮದುವೆಯ ತನಿಖೆ ಬೇಡ: ಸುಪ್ರೀಂ ಕೋರ್ಟ್‌
ಹಾದಿಯಾ ಮದುವೆಯ ತನಿಖೆ ಬೇಡ: ಸುಪ್ರೀಂ ಕೋರ್ಟ್‌   

ನವದೆಹಲಿ: ಮದುವೆಯಾಗುವುದು ಪ್ರತಿ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಆಯ್ಕೆ. ಹಾಗಾಗಿ ಮಹಿಳೆಯೊಬ್ಬರ ಮದುವೆಯ ಬಗ್ಗೆ ಅಪರಾಧ ತನಿಖೆ ನಡೆಸುವುದಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕೇರಳದ ಹಿಂದೂ ಯುವತಿ ಅಖಿಲಾರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆಯೇ ಮತ್ತು ಇಂತಹ ಇತರ ಪ್ರಕರಣಗಳು ಅಲ್ಲಿ ನಡೆದಿವೆಯೇ ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಬೇಕು. ಅಖಿಲಾ ಮತ್ತು ಶಫೀನ್‌ ಜಹಾನ್‌ ಮದುವೆ ಮತ್ತು ಅಖಿಲಾ ಮತಾಂತರದ ಹಿಂದೆ ಬಲವಂತ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾದ ಬಳಿಕ ಅಖಿಲಾ ಹೆಸರನ್ನು ಹಾದಿಯಾ ಎಂದು ಬದಲಿಸಲಾಗಿದೆ.

‘ಹಾದಿಯಾಗೆ 24 ವರ್ಷವಾಗಿದೆ. ಅವರದ್ದು ಸ್ವತಂತ್ರ ನಿರ್ಧಾರವೇ ಅಥವಾ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಅವರ ಯೋಚನಾ ಪ್ರಕ್ರಿಯೆಯೊಳಗೆ ನಾವು ಹೋಗಲಾಗದು. ಅವರ ತಲೆತಿರುಗಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗದು. ಆಕೆ ನಮ್ಮ ಮುಂದೆ ಬಂದಿದ್ದರು. ಆ ವ್ಯಕ್ತಿಯನ್ನು ಮದುವೆಯಾಗುವುದು ತಮ್ಮದೇ ನಿರ್ಧಾರ ಎಂದು ಅವರು ಹೇಳಿದ್ದರು’ ಎಂದು ಪೀಠ ಹೇಳಿದೆ.

ADVERTISEMENT

ಮದುವೆಯನ್ನು ಅಪರಾಧ ಚಟುವಟಿಕೆಗಳಿಂದ ದೂರ ಇರಿಸಬೇಕು. ಮದುವೆಯ ವಿಚಾರದಲ್ಲಿಯೂ ತನಿಖೆ ನಡೆಸಿದರೆ ಕೆಟ್ಟ ನಿದರ್ಶನ ಹಾಕಿಕೊಟ್ಟಂತಾಗುತ್ತದೆ. ಹಾಗಾಗಿ ಹಾದಿಯಾ ಮದುವೆ ವಿಚಾರದಲ್ಲಿ ತನಿಖೆ ಮಾಡಬಾರದು ಎಂದು ಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.