ನವದೆಹಲಿ : ಚುನಾಯಿತ ಸರ್ಕಾರವೇ ದೆಹಲಿ ಆಡಳಿತದ ರೂವಾರಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮಧ್ಯೆ ಅಧಿಕಾರಕ್ಕಾಗಿ ಮತ್ತೆ ಜಟಾಪಟಿ ಆರಂಭವಾಗಿದೆ.
ದೆಹಲಿಯ ವಿವಿಧ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಿಸುವ ಮತ್ತು ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆಯೊಂದನ್ನು ದೆಹಲಿ ಸರ್ಕಾರ ರೂಪಿಸಿದೆ. ಅದನ್ನು ಅನುಷ್ಠಾನಕ್ಕೆ ತರಲು ಸೇವಾ ಇಲಾಖೆಯು ಸರ್ಕಾರದ ಸುಪರ್ದಿಯಲ್ಲಿ ಇರಬೇಕಾಗುತ್ತದೆ. ಹೀಗಾಗಿಸೇವಾ ಇಲಾಖೆಯ ಅಧಿಕಾರವನ್ನು ಹಸ್ತಾಂತರಿಸು
ವಂತೆ ಬೈಜಾಲ್ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿ ಮಾಡಿ, ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದರು. ಆದರೆ ಆ ಮನವಿಯನ್ನು ಬೈಜಾಲ್ ತಿರಸ್ಕರಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಜತೆಗಿನ 25 ನಿಮಿಷಗಳ ಭೇಟಿಯ ನಂತರ ಕೇಜ್ರಿವಾಲ್ ಈ ಬಗ್ಗೆ ಪತ್ರಕರ್ತರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಶಿಕ್ಷಣ, ನೀರು, ವಿದ್ಯುತ್ ಎಲ್ಲವೂ ದೆಹಲಿ ಸರ್ಕಾರದ ಜವಾಬ್ದಾರಿ. ಈ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಿಸುವ ಅಧಿಕಾರವೇ ಇಲ್ಲದಿದ್ದರೆ, ಜವಾಬ್ದಾರಿ ನಿರ್ವಹಿಸುವುದಾದರೂ ಹೇಗೆ? ಗೃಹ ಸಚಿವಾಲಯದ ಸೂಚನೆ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಹೀಗೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಹತ್ತಿಕ್ಕುವ ಸಂಚಿನ ಭಾಗವಾಗಿಯೇ ಹೀಗೆ ಮಾಡಲಾಗುತ್ತಿದೆ’ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
*******
ಸೇವಾ ಇಲಾಖೆಯು ಲೆ.ಗವರ್ನರ್ ಸುಪರ್ದಿಗೆ ಬರುತ್ತದೆ ಎಂದು ಗೃಹ ಸಚಿವಾಲಯ 2015ರಲ್ಲೇ ಹೇಳಿದೆ. ಸುಪ್ರೀಂ ಕೋರ್ಟ್ನ ತೀರ್ಪು ಇದಕ್ಕೆ ಅನ್ವಯಿಸುವುದಿಲ್ಲ
-ಅನಿಲ್ ಬೈಜಾಲ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್
ಸುಪ್ರೀಂ ಕೋರ್ಟ್ನ ನಿರ್ದೇಶನವನ್ನು ಕೇಂದ್ರ ಸರ್ಕಾರ ಬಹಿರಂಗವಾಗಿಯೇ ತಿರಸ್ಕರಿಸಿದ್ದು ಸ್ವತಂತ್ರ ಭಾರತದಲ್ಲಿ ಇದೇ ಮೊದಲು. ಇದು ಅರಾಜಕತೆಗೆ ದಾರಿಯಾಗುತ್ತದೆ
- ಅರವಿಂದ ಕೇಜ್ರಿವಾಲ್,ದೆಹಲಿ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.