ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪರಿಷ್ಕೃತ ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಪರಿಷ್ಕೃತ ಲಾಂಛನ
ಪರಿಷ್ಕೃತ ಲಾಂಛನ   

ರಾಯಚೂರು: ಡಿಸೆಂಬರ್‌ 2, 3 ಮತ್ತು 4ರಂದು ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪರಿಷ್ಕೃತ ಲಾಂಛನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸೋಮವಾರ ಬಿಡುಗಡೆ ಮಾಡಿದೆ.

ಚೌಕಾಕಾರದ ಹಳೆಯ ಲಾಂಛನದಲ್ಲಿದ್ದ ಕಮಾನು ಮತ್ತು ಅದರ ಎರಡೂ ಬದಿಗೆ ಇದ್ದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌) ಮತ್ತು ಹಟ್ಟಿ ಚಿನ್ನದ ಗಣಿಯನ್ನು ಸೂಚಿಸುವ ಚಿತ್ರಗಳು ಮಾಯವಾಗಿವೆ. ಇದರ ಬದಲು ದೇವಾಲಯದ ಗೋಪುರ ಸ್ಥಾನ ಪಡೆದುಕೊಂಡಿದೆ. ಕಲಾತ್ಮಕತೆಗೆ ಒತ್ತು ನೀಡಿ, ಬಣ್ಣದಲ್ಲಿ ಕೆಲವು ಪರಿಷ್ಕರಣೆ ಮಾಡಿರುವ ಲಾಂಛನವು ವರ್ತುಲಾಕಾರದಲ್ಲಿದೆ. ಈ ಹೊಸ ಲಾಂಛನವನ್ನೂ ಕಲಾವಿದರಾದ ಅಮರೇಗೌಡ ಮತ್ತು ಅಭಿಷೇಕ್‌ ಸಿದ್ಧಪಡಿಸಿದ್ದಾರೆ.

‘ಹಳೆಯ ಲಾಂಛನದಲ್ಲಿ ಕಲಾತ್ಮಕತೆಯ ಕೊರತೆ ಇತ್ತು ಮತ್ತು ಮುದ್ರಣಕ್ಕೆ ಅಷ್ಟೊಂದು ಸರಿಹೊಂದುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಲಾಂಛನವನ್ನು ಪರಿಷ್ಕರಣೆ ಮಾಡಲಾಗಿದೆ. ಬೇರೆ ರೀತಿಯ ಆಕ್ಷೇಪಣೆಗಳೇನು ಇರಲಿಲ್ಲ. ಪರಿಷ್ಕೃತ ಲಾಂಛನವು ಸುಂದರವಾಗಿ ಮತ್ತು ಹೆಚ್ಚು ಕಲಾತ್ಮಕವಾಗಿ ಮೂಡಿಬಂದಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಹೇಳಿದರು.

ಹಳೆಯ ಲಾಂಛನದಲ್ಲಿ ಇಸ್ಲಾಂ ಧಾರ್ಮಿಕ ಸ್ಥಳದ ಸಂಕೇತವಾಗಿ ಏಕ್ ಮೀನಾರ್‌ ಮಸೀದಿಯ ಬುರುಜು ಇತ್ತು. ಆದರೆ, ಹಿಂದೂ ಧಾರ್ಮಿಕ ಕ್ಷೇತ್ರದ ಕುರುಹು ಇರಲಿಲ್ಲವೆಂಬ ಆಕ್ಷೇಪಗಳು ಕೇಳಿಬಂದಿದ್ದವು. ಹಳೆಯ ಲಾಂಛನವನ್ನು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ್‌ ಸೆ. 29ರಂದು ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.