ADVERTISEMENT

ಅಪ್ಪನನ್ನೇ ಕೊಂದ ಮಗ!

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2017, 19:38 IST
Last Updated 31 ಮಾರ್ಚ್ 2017, 19:38 IST
ಅಪ್ಪನನ್ನೇ ಕೊಂದ ಮಗ!
ಅಪ್ಪನನ್ನೇ ಕೊಂದ ಮಗ!   

ಬಾಗಲಕೋಟೆ: ಮಗನೇ ಅಪ್ಪನನ್ನು ಕೊಲೆ ಮಾಡಿದ್ದ ಐದು ತಿಂಗಳ ಹಿಂದಿನ ಪ್ರಕರಣವೊಂದರ ವಿಡಿಯೊ ದೃಶ್ಯಾವಳಿ ಜಿಲ್ಲೆಯಲ್ಲಿ ಹಲವರ ಮೊಬೈಲ್‌ಫೋನ್‌ಗಳಲ್ಲಿ ವಾಟ್ಸ್‌ ಆ್ಯಪ್‌ ಮೂಲಕ ಹರಿದಾಡುತ್ತಿದೆ.

ಹುನಗುಂದ ತಾಲ್ಲೂಕು ಕೊಡಿಹಾಳ ಗ್ರಾಮದಲ್ಲಿ 2016ರ ಅಕ್ಟೋಬರ್ 29ರಂದು ಮಲ್ಲಪ್ಪ ಕೈರವಾಡಗಿ ಎಂಬುವವರ ಕೊಲೆ ನಡೆದಿತ್ತು. ಆಸ್ತಿ ಹಂಚಿಕೆ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಮಲ್ಲಪ್ಪ ಅವರನ್ನು ಸ್ವತಃ ಅವರ ಪುತ್ರ  ದೇವೇಂದ್ರಪ್ಪ ಕೈರವಾಡಗಿ, ಅಳಿಯ ಶಿವಪ್ಪ ಭೂಪರದ, ಸಹೋದರರಾದ ಬಸಪ್ಪ ಹಾಗೂ ದೇವಪ್ಪ ಕೈರವಾಡಗಿ, ಬಸಪ್ಪ ಅವರ ಪುತ್ರ ಮಹೇಶ ಸೇರಿ ಹೊಲದಲ್ಲಿಯೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಇಳಕಲ್ ಠಾಣೆ ಪೊಲೀಸರು ಆಗ ಬಂಧಿಸಿದ್ದರು.
ಬೇಡಿಕೊಂಡರೂ ಬಿಡದೇ ಬಡಿದರು: ಮಲ್ಲಪ್ಪ ಅವರಿಗೆಗೆ ಮಗ ದೇವೇಂದ್ರಪ್ಪ ಹಾಗೂ ಇಬ್ಬರು ಹೆಣ್ಣು ಮಕ್ಕಳು. ಇರುವ 6 ಎಕರೆ ಜಮೀನಿನಲ್ಲಿ ಮೂರು ಎಕರೆಯನ್ನು ಇಬ್ಬರು ಹೆಣ್ಣು ಮಕ್ಕಳ ಹೆಸರಿಗೆ ಮಾಡಲು ಮುಂದಾಗಿದ್ದು, ಮಗನ ವಿರೋಧಕ್ಕೆ ಕಾರಣವಾಗಿತ್ತು. ಪತ್ನಿಯೊಂದಿಗೆ ಗ್ರಾಮದಲ್ಲಿಯೇ ಬೇರೆ ಮನೆ ಮಾಡಿಕೊಂಡಿದ್ದ ದೇವೇಂದ್ರಪ್ಪ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಅಪ್ಪನೊಂದಿಗೆ ಜಗಳವಾಡುತ್ತಿದ್ದನು. ಈ ಬಗ್ಗೆ ಊರಿನಲ್ಲಿ ಅನೇಕ ಬಾರಿ ಪಂಚಾಯ್ತಿ ಕೂಡ ಮಾಡಲಾಗಿತ್ತು ಎನ್ನಲಾಗಿದೆ. ಅ.29ರಂದು ಹೊಲ ಉಳುಮೆ ಮಾಡಲು ಹೋದ ಅಪ್ಪನೊಂದಿಗೆ ಜಗಳ ತೆಗೆದ ಅವನು ಸಂಬಂಧಿಕರೊಂದಿಗೆ ಸೇರಿ ಹಲ್ಲೆ ನಡೆಸಿದ್ದನು. ಆಗ ತೀವ್ರ ಗಾಯಗೊಂಡಿದ್ದ ಮಲ್ಲಪ್ಪ ಸಮೀಪದ ನಾಗರಾಳದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು

ADVERTISEMENT


ಆರೋಪಿಗಳು ಮಲ್ಲಪ್ಪನಿಗೆ ಹೊಡೆಯುವಾಗ ಗ್ರಾಮದ ಯುವಕನೊಬ್ಬ ಅದನ್ನು ಮೊಬೈಲ್‌ಫೋನ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದನು. ಅದನ್ನು ಆತ ಪೊಲೀಸರಿಗೂ ನೀಡಿದ್ದನು. ಅದೀಗ ವೈರಲ್ ಆಗಿದೆ ಎಂದು ತಿಳಿದುಬಂದಿದೆ.
ಹೊಡೆಯದಂತೆ ಹಾಗೂ ಜೀವ ತೆಗೆಯದಂತೆ ಮಲ್ಲಪ್ಪ ತನ್ನ ಮಗ ಹಾಗೂ ಸಹೋದರರಿಗೆ ಬೇಡಿಕೊಳ್ಳುವ ದೃಶ್ಯ ವಿಡಿಯೊದಲ್ಲಿದೆ. ಎಷ್ಟೇ ಬೇಡಿಕೊಂಡರೂ ಕರುಣೆ ತೋರದ ಆರೋಪಿಗಳು ಹೊಡೆದು, ತುಳಿಯುವ ದೃಶ್ಯ ಅದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.