ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲು ಮುಂದಾಗಿರುವ ಅವರ ಅಭಿಮಾನಿಗಳಿಬ್ಬರು ಕುಮಾರಣ್ಣ ಬಾಂಡ್ ಎಂಬ ವಿಶೇಷ ವಿಮಾ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.
ಇದೇ 16ರಂದು ಎಚ್.ಡಿ ಕುಮಾರಸ್ವಾಮಿ ಅವರು 59ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರ ಅಂಗವಾಗಿ ಅವರ ಅಭಿಮಾನಿಗಳಾದ ರಾಜ್ಯ ಯುವ ಜನತಾದಳದ ಉಪಾಧ್ಯಕ್ಷ ಸೈಯ್ಯದ್ ಶಾಹಿದ್ ಮತ್ತು ಬೆಂಗಳೂರು ನಗರ ಯುವ ಜನತಾದಳದ ಉಪಾಧ್ಯಕ್ಷ ರಾಜೇಂದ್ರ ಸಿಂಗ್ ಕುಮಾರಣ್ಣ ಬಾಂಡ್ ಯೋಜನೆಯನ್ನು ಪ್ರಯೋಜಿಸುತ್ತಿದ್ದಾರೆ. ರಾಮನಗರ ಜಿಲ್ಲೆಯ, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕುಗಳಲ್ಲಿ ಇದೇ ಡಿ.16ರಂದು ಜನಿಸುವ ಮಕ್ಕಳಿಗೆ ತಲಾ 5000 ರೂ.ಗಳ ವಿಶೇಷ ಬಾಂಡ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಕುಮಾರಸ್ವಾಮಿ ಅವರ ಹುಟ್ಟಹಬ್ಬದ ದಿನವಾದ ಡಿ.16ರಂದು ಜನಿಸಿದ ಮಕ್ಕಳಿಗಷ್ಟೇ ಈ ಬಾಂಡ್ ಲಭ್ಯವಾಗಲಿದೆ. ಪೋಷಕರು ಮಗುವಿನ ಜನ್ಮದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಇರುವ ಕುಟುಂಬಗಳು ಮಾತ್ರ ಈ ಯೋಜನೆಗೆ ಅರ್ಹರು. ಈ ಬಾಂಡ್ 6 ವರ್ಷಕ್ಕೆ 10 ಸಾವಿರ, 12 ವರ್ಷಗಳಿಗೆ 20 ಸಾವಿರ, 18 ವರ್ಷಕ್ಕೆ 40ಸಾವಿರ, 24 ವರ್ಷಕ್ಕೆ 80ಸಾವಿರ ಬೆಲೆ ಬಾಳಲಿದೆ.
ಹೆಚ್ಚಿನ ಮಾಹಿತಿಗಾಗಿ 9945767862, 7975911528 ಗೆ ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.