ಹುಬ್ಬಳ್ಳಿ: ಹುಬ್ಬಳ್ಳಿಯ ವಿಶ್ವೇಶ್ವರನಗರ ನಿವಾಸಿ, ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ಮನೆ, ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ. ಕಚೇರಿ ಸೇರಿದಂತೆ ಮನೆಯಲ್ಲಿ ₹7.50 ಲಕ್ಷ ನಗದು ಪತ್ತೆಯಾಗಿದೆ.
ಕರಿಯಪ್ಪ ಕರ್ನಲ್ ಅವರ ಪತ್ನಿ ಶಾಂತಾ ಅವರಿಗೆ ರೇಷ್ಮೆ ಸೀರೆಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅವರಲ್ಲಿದ್ದ ಐದು ಸಾವಿರಕ್ಕೂ ಹೆಚ್ಚು ರೇಷ್ಮೆ ಸೀರೆ ಪತ್ತೆಯಾಗಿವೆ. ಅವುಗಳ ಮೌಲ್ಯ ₹1.5 ಕೋಟಿ ಎಂದು ಅಂದಾಜಿಸಲಾಗಿದೆ.
ರೇಷ್ಮೆ ಸೀರೆ ಮಧ್ಯದಲ್ಲಿ ಬಚ್ಚಿಟ್ಟಿದ್ದ ₹2,000 ಮುಖಬೆಲೆಯ ₹1.30 ಲಕ್ಷ ನಗದು ಸಹ ಪತ್ತೆಯಾಗಿದೆ. ಮಂಜುನಾಥ ನಗರದಲ್ಲಿನ ಬಂಗಲೆ, ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್, ಕೃಷಿ ಜಮೀನು, ನಿವೇಶನ, ಕಾರು, ಬೈಕ್, ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ, ಖಾಲಿ ನಿವೇಶನ, ಚಿನ್ನಾಭರಣ ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ವಿವರ: ಧಾರವಾಡ, ಹಾವೇರಿ ಮತ್ತು ವಿಜಯಪುರದ ಎಸಿಬಿಯ ಮೂರು ಪ್ರತ್ಯೇಕ ತಂಡಗಳು ಕರಿಯಪ್ಪ ಕರ್ನಲ್ ಮನೆ, ನವನಗರದ ಕಚೇರಿ ಮತ್ತು ಬಿಡ್ನಾಳದಲ್ಲಿರುವ ಕರಿಯಪ್ಪ ಅವರ ಸ್ನೇಹಿತ ನಿರಂಜನ ಹಿರೇಮಠ ಅವರ ಮನೆ ಮೇಲೆ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
40 ವರ್ಷ ಕರ್ತವ್ಯ ನಿರ್ವಹಿಸಿರುವ ಕರಿಯಪ್ಪ ಅವರು ಬರುವ ಜೂನ್ನಲ್ಲಿ ನಿವೃತ್ತಿ ಹೊಂದಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.