ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಡೆಸಲಾದ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪೋಲೊ ಆಸ್ಪತ್ರೆಯಲ್ಲಿ ಡಾ. ಸತ್ಯಕಿ ಅವರ ನೇತೃತ್ವದಲ್ಲಿ ಶನಿವಾರ ಶಸ್ತ್ರ ಚಿಕಿತ್ಸೆ ನಡೆದಿದೆ. ಡಾ. ಅರುಣ್, ಡಾ. ಗಿರೀಶ್, ಡಾ. ಧರ್ಮೇಶ್, ಡಾ. ರವೀಂದ್ರನಾಥ್, ಡಾ. ಜಗದೀಶ್ ಅವರನ್ನು ಒಳಗೊಂಡ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿದೆ.
‘ಎಚ್ಡಿಕೆ ಅವರ ಹೃದಯ ಕವಾಟವನ್ನು ಬದಲಾಯಿಸಲಾಗಿದೆ. ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 48 ಗಂಟೆಗಳ ನಂತರ ಅವರನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗುತ್ತದೆ. ಅವರಿಗೆ ಎರಡರಿಂದ ನಾಲ್ಕು ವಾರ ವಿಶ್ರಾಂತಿ ಅಗತ್ಯವಿದೆ’ ಎಂದು ಅಪೋಲೊ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಹೇಳಿದ್ದಾರೆ.
‘ಐಸಿಯುನಲ್ಲಿ ಇರುವ ಕಾರಣ ಸದ್ಯ ಯಾರೂ ಅವರನ್ನ ಭೇಟಿಯಾಗಲು ಸಾಧ್ಯವಿಲ್ಲ. ಅಭಿಮಾನಿಗಳು ಆಸ್ಪತ್ರೆಗೆ ಬರುವುದು ಬೇಡ. ದೂರದಿಂದಲೇ ಹಾರೈಸಿ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.