ಬೆಂಗಳೂರು: ಕೆಮ್ಮು ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ನ್ಯಾಚುರೋಪತಿ ಚಿಕಿತ್ಸೆ ಶುಕ್ರವಾರ ಆರಂಭವಾಗಿದೆ.
ಚಿಕಿತ್ಸೆಗೆ ದಿನವೊಂದಕ್ಕೆ₹ 30 ಸಾವಿರ ವೆಚ್ಚವಾಗಲಿದ್ದು, 10 ದಿನಕ್ಕೆ₹ 3 ಲಕ್ಷ ಭರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನಿತ್ಯದ ಚಿಕಿತ್ಸಾ ವೆಚ್ಚ₹ 19,500, ಸಹಾಯಕನ ಸೇವೆಗೆ₹ - 1 ಸಾವಿರ, ಫುಲ್ ಮಡ್ಬಾತ್ -₹ 700, ಆಯಿಲ್ ಥೆರಪಿ -₹ 1ಸಾವಿರ, ಡೀಪ್ ಟಿಶ್ಯೂ ಥೆರಪಿ -₹ 1,500, ಹಾಟ್ ಸ್ಟೋನ್ ಥೆರಪಿ -₹ 2,500, ಸಾಲ್ಟ್ ಗ್ಲೋ ಥೆರಪಿ -₹ 2,500, ಕಾಲನ್ ಹೈಡ್ರೋ ಥೆರಪಿ -₹ 1,100, ಯೋಗ (ನಿತ್ಯ) -₹ 700 ಆಗಲಿದೆ ಎಂದು ಅಂದಾಜಿಸಲಾಗಿದೆ.
‘ಕೇಜ್ರಿವಾಲ್ ಅವರಿಗೆ ಬೆಳಿಗ್ಗೆ 5.30 ರಿಂದ ಚಿಕಿತ್ಸೆ ಆರಂಭ ಮಾಡಲಾಯಿತು. ಅವರು ಯೋಗ, ಧ್ಯಾನ, ಪ್ರಾಣಾಯಾಮ ಮಾಡಿದರು. ನಂತರ ಅವರಿಗೆ ಮಡ್ಬಾತ್, ಹಿಪ್ ಬಾತ್, ಹಾಟ್ ಸ್ಟೋನ್ ಮಸಾಜ್ ಸೇರಿದಂತೆ ವಿವಿಧ ಪ್ರಕೃತಿ ಚಿಕಿತ್ಸೆ ನೀಡಲಾಯಿತು. ರಾತ್ರಿ 8.30 ರವರೆಗೂ ಅವರಿಗೆ ಚಿಕಿತ್ಸೆ ನೀಡಲಾಯಿತು’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಬಬೀನಾ ಹೇಳಿದರು.
‘ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಮೊದಲು ಆ ಸಮಸ್ಯೆಗೆ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗಿದೆ. ಕಫ ಮತ್ತು ಕೆಮ್ಮು ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಹಣ್ಣಿನ ರಸ, ಸೂಪು, ಬೇಯಿಸಿದ ತರಕಾರಿಯನ್ನು ಆಹಾರವಾಗಿ ನೀಡಲಾಗಿದ್ದು, ಪ್ರತಿ ಎರಡು ಗಂಟೆಗೊಮ್ಮೆ ಹಾಗಲಕಾಯಿ ರಸ, ಮೆಂತ್ಯೆಸೊಪ್ಪು ರಸ ಸೇರಿದಂತೆ ವಿವಿಧ ತರಕಾರಿಯ ರಸವನ್ನು ನೀಡಲಾಗುತ್ತಿದೆ. ಇದು ಕಫ ಮತ್ತು ಕೆಮ್ಮಿನ ಸಮಸ್ಯೆ ಕಡಿಮೆ ಮಾಡಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.