ADVERTISEMENT

ಗಣಿ ಹರಾಜಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 20:31 IST
Last Updated 30 ಜನವರಿ 2015, 20:31 IST

ಬೆಂಗಳೂರು:ಖನಿಜ ಮತ್ತು ಗಣಿಗಾರಿಕೆ ಗುತ್ತಿಗೆಯನ್ನು ಹರಾಜು ಮೂಲಕ ನೀಡುವ ಕೇಂದ್ರದ ನಿರ್ಧಾರಕ್ಕೆ ರಾಜ್ಯ ಗಣಿ ಇಲಾಖೆಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಇಲಾಖೆಯ ನೌಕರರು, ಕೈಗಾರಿಕೋದ್ಯಮಿಗಳು, ಗಣಿಉದ್ಯಮಿಗಳ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ ಎಂದರು.

ನೂತನ ಗಣಿ ಮತ್ತು ಖನಿಜ ತಿದ್ದುಪಡಿ ಶಾಸನದ ಅನುಸಾರ ಇಂಥ ಹರಾಜು ಪ್ರಕ್ರಿಯೆ,  ರಾಜ್ಯ ಸರ್ಕಾರದ ಆಡಳಿತದಲ್ಲಿ ಕೇಂದ್ರವು ಮೂಗು ತೂರಿಸಿದಂತಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಲು ಕೇಂದ್ರ ಚಿಂತಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಗಣಿ ಗುತ್ತಿಗೆಯನ್ನು ಪ್ರಮಾಣೀಕರಿಸಬೇಕು. ಆದರೆ, ಗಣಿ ಕಾಯ್ದೆ ಕಲಂ 30ರ ಅನುಸಾರ ಈ ವಿಷಯದಲ್ಲಿ ರಾಜ್ಯ ಸರ್ಕಾರ ಏನಾದರೂ ವೈಫಲ್ಯಗಳನ್ನು ಹೊಂದಿದ್ದರೆ ಅದನ್ನು ಸರಿಪಡಿಸಲು ಕೇಂದ್ರ ನಿರ್ದೇಶಿಸಬಹುದಷ್ಟೇ. ಬದಲಿಗೆ  ಕೇಂದ್ರವೇ ನೇರವಾಗಿ ಈ ಕೆಲಸವನ್ನು ಮಾಡುವಂತಿಲ್ಲ ಎಂದು ವಿವರಿಸಿದರು.

ಗಣಿಗಾರಿಕೆಯ ಗುತ್ತಿಗೆ ಅವಧಿಯನ್ನು 20 ವರ್ಷದಿಂದ 50ವರ್ಷಕ್ಕೆ ಏರಿಸುವುದು, ಈ ಹಿಂದೆ ನೀಡಿದ ಲೀಸ್‌ ಅವಧಿಯನ್ನು ವಿಸ್ತರಿಸುವುದು, ಗಣಿಗಳನ್ನು ಹರಾಜು ಹಾಕುವುದು, ಖನಿಜ ಪತ್ತೆಗೆ ನೀಡುವ ಲೀಸ್‌ ಅನ್ನು ಗಣಿಗಾರಿಕೆ ಲೀಸ್‌ ಆಗಿ  ಪರಿವರ್ತಿಸುವುದು ಮುಂತಾದ ಮಹತ್ವದ ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ತಯಾರಿ ನಡೆಸಿದೆ. ಈ ಸಂಬಂಧ ಗಣಿ ಉದ್ಯಮಿಗಳು, ಕೈಗಾರಿಕೋದ್ಯಮಿಗಳ ಅಭಿಪ್ರಾಯ  ಸಂಗ್ರಹಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.