ಹುನಗುಂದ (ಬಾಗಲಕೋಟೆ ಜಿಲ್ಲೆ): ಪಟ್ಟಣದ ಯುವ ಛಾಯಾಗ್ರಾಹಕ ಶ್ರೀಶೈಲ ಹೊಸಮನಿ (ಕಾರ್ತೀಕ್) ಕ್ಯಾಮೆರಾದಲ್ಲಿ ಸೆರೆಯಾದ ‘ಗುಬ್ಬಚ್ಚಿ ಹಿಡಿದ ಹಸಿರು ಹಾವಿನ’ ಚಿತ್ರಕ್ಕೆ ಅಂತರರಾಷ್ಟ್ರೀಯ ಬಹುಮಾನ ಲಭಿಸಿದೆ.
ಉತ್ತರ ಪ್ರದೇಶದ ಲಖನೌ ಕ್ಯಾಮೆರಾ ಕ್ಲಬ್ ಸಂಸ್ಥೆ ಇತ್ತೀಚೆಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಹೊಸಮನಿ ಅವರ ಈ ಚಿತ್ರ ಬಹುಮಾನ ಪಡೆದಿದೆ ಎಂದು ಎಲ್ಸಿಸಿ ಅಧ್ಯಕ್ಷ ಅನಿಲ್ ರಿಸಾಲ್ ಸಿಂಗ್ ತಿಳಿಸಿದ್ದಾರೆ. ಈ ಪ್ರಶಸ್ತಿಯನ್ನು ಡಾ.ರಜತ್ ಡೇ ಅವರ ಸ್ಮರಣಾರ್ಥ ನೀಡಲಾಗುತ್ತದೆ ಎಂದು ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರಿಗೆ ನಿಸರ್ಗ ವಿಭಾಗದಲ್ಲಿ ಬಹುಮಾನ ಸಿಕ್ಕಿದೆ. ಇದಲ್ಲದೇ, ಇವರ ಇನ್ನೂ ಮೂರು ಚಿತ್ರಗಳು ಅಂತರರಾಷ್ಟ್ರೀಯ ಪ್ರದರ್ಶನ–2014 ಕ್ಕೆ ಆಯ್ಕೆಯಾಗಿವೆ.
ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ, ಜರ್ಮನಿ, ಗ್ರೀಸ್, ಈಜಿಪ್ಟ್, ಚೀನಾ, ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್, ಸ್ಪೇನ್, ಫ್ರಾನ್ಸ್, ರಷ್ಯಾ, ಇಟಲಿ, ದಕ್ಷಿಣ ಕೊರಿಯಾ, ನೆದರ್ಲ್ಯಾಂಡ್, ಟರ್ಕಿ ಸೇರಿದಂತೆ 48 ದೇಶಗಳ ಛಾಯಾಗ್ರಾಹಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.