‘ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ್ದರಿಂದಾಗಿ ಜನಸಾಮಾನ್ಯರಿಗೆ ಅಪಾರ ಸಂಕಷ್ಟ ಎದುರಾಯಿತು. ಗ್ರಾಮೀಣರು ಹಾಗೂ ರೈತರಿಗೆಸೇವೆ ನೀಡುವ ಸಹಕಾರ ವಲಯ ಅಕ್ಷರಶಃ ಸ್ತಬ್ಧವಾಯಿತು.
ಅದರಿಂದ ಸಾಧಿಸಿದ ಫಲಶ್ರುತಿ ಏನು ಎಂಬುದನ್ನು ಕೇಂದ್ರ ಸರ್ಕಾರ ತಿಳಿಸಬೇಕು’ ಎಂದು ಟೀಕಾ ಪ್ರಹಾರ ನಡೆಸಿದರು. ನೋಟು ರದ್ದತಿಯಿಂದಾಗಿ ದಸ್ತಾವೇಜು ನೋಂದಣಿ ಸಂಖ್ಯೆ ಇಳಿಮುಖವಾಯಿತು. ಇದರಿಂದ ₹1,350 ಕೋಟಿ ರಾಜಸ್ವ ನಷ್ಟ ವಾಯಿತು ಎಂದು ಸಿದ್ದರಾಮಯ್ಯ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
₹1,86,561 ಕೋಟಿ ಮೊತ್ತದ ಬಜೆಟ್ನಲ್ಲಿ ಯೋಜನೆ ಮತ್ತು ಯೋಜನೇತರ ಎಂಬ ಪ್ರತ್ಯೇಕ ವಿಭಜನೆ ಮಾಡಿಲ್ಲ. ಕಳೆದ ಬಜೆಟ್ಗೆ ಹೋಲಿಸಿದರೆ ಬಜೆಟ್ ಅಂದಾಜು ಮೊತ್ತ ಶೇ 14.16ರಷ್ಟು ಹೆಚ್ಚಳವಾಗಿದೆ.
ವಿವಿಧ ಮೂಲಗಳಿಂದ ₹1,44,892 ಕೋಟಿ ರಾಜಸ್ವ ಜಮೆಯನ್ನು ನಿರೀಕ್ಷಿಸಲಾಗಿದೆ.
ಜನಪ್ರಿಯ ಘೋಷಣೆಗಳ ಸರಮಾಲೆ: 2013ರಲ್ಲಿ ರಾಜ್ಯದಲ್ಲಿ 43 ಹೊಸ ತಾಲ್ಲೂಕುಗಳನ್ನು ರಚಿಸುವುದಾಗಿ ಅಂದಿನ ಬಿಜೆಪಿ ಸರ್ಕಾರ ಪ್ರಕಟಿಸಿತ್ತು. ಅದಕ್ಕೆ ಇನ್ನಷ್ಟು ಸೇರಿಸಿ, 49 ತಾಲ್ಲೂಕುಗಳನ್ನು ರಚಿಸುವುದಾಗಿ ಬಜೆಟ್ನಲ್ಲಿ ಉಲ್ಲೇಖಿಸಿದ್ದರೂ, ಅದಕ್ಕೆ ಅನುದಾನ ಹಂಚಿಕೆ ಮಾಡಿಲ್ಲ.
ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ‘ಅಯ್ಯ ಕ್ಯಾಂಟಿನ್’ ಆರಂಭಿಸಲಾಗುತ್ತದೆ ಎಂದು ಕಳೆದ ಎರಡು ವರ್ಷದಿಂದ ಕೇಳಿ ಬರುತ್ತಿದ್ದ ಮಾತನ್ನು ಈ ಬಜೆಟ್ನಲ್ಲಿ ಸಾಕಾರಗೊಳಿಸುವ ತೀರ್ಮಾನ ಮಾಡಲಾಗಿದೆ.
ಬೆಂಗಳೂರಿನ 198 ವಾರ್ಡ್ಗಳಲ್ಲಿ ತಲಾ 1 ರಂತೆ ‘ನಮ್ಮ ಕ್ಯಾಂಟಿನ್’ ಆರಂಭಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸ್ತ್ರೀಶಕ್ತಿ ಒಕ್ಕೂಟಗಳ ಸಹಕಾರದಲ್ಲಿ ‘ಸವಿರುಚಿ’ ಹೆಸರಿನಲ್ಲಿ ಸಂಚಾರಿ ಕ್ಯಾಂಟಿನ್ ಆರಂಭಿಸುವುದಾಗಿ ಪ್ರಕಟಿಸಿದ್ದರೂ, ರಿಯಾಯಿತಿ ದರದಲ್ಲಿ ಊಟ ನೀಡುವ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ.
ದುರ್ಬಲರ ಶಿಕ್ಷಣಕ್ಕೆ ನೆರವು: ಐಐಟಿ,ಐಐಎಂನಲ್ಲಿ ಪ್ರವೇಶ ಪಡೆಯುವ ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ₹ 2 ಲಕ್ಷ ನೆರವು, ಎಸ್ಎಸ್ಎಲ್ಸಿ, ಪಿಯು, ಪದವಿ, ಸ್ನಾತಕೋತ್ತರ ಶಿಕ್ಷಣದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 4 ಪಟ್ಟು ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಹೆಣ್ಣು ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯ ಇರುವ ವಸತಿಸಹಿತ ಪ್ರಥಮದರ್ಜೆ ಕಾಲೇಜು ಆರಂಭಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.
ಇಡೀ ಶಿಕ್ಷಣ ವ್ಯವಸ್ಥೆಗೆ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ, ಶುಲ್ಕ, ಬೋಧನಾ ಸಂಪನ್ಮೂಲ, ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ನಿಯಂತ್ರಣ ಪಡೆಯಲು ಕರ್ನಾಟಕ ಶಾಲಾ ಶಿಕ್ಷಣ ನೀತಿ ರೂಪಿಸುವುದಾಗಿ ತಿಳಿಸಿದ್ದಾರೆ.
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಕಿರಣ ಯೋಜನೆಯಡಿ ಶಿಕ್ಷಕರ ಹಾಜರಾತಿಗೆ ಬಯೊಮೆಟ್ರಿಕ್ ವ್ಯವಸ್ಥೆ ಜಾರಿ, ಒಂದನೆ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಸುವುದನ್ನು ಕಡ್ಡಾಯಗೊಳಿಸುವುದಾಗಿ ಹೇಳಿದ್ದಾರೆ.
ಕಾರ್ಮಿಕರ ನಿವೃತ್ತಿ ವಯಸ್ಸು 60ಕ್ಕೆ
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ಕ್ಕೆ ಏರಿಸಿದ ರೀತಿಯಲ್ಲಿ ಖಾಸಗಿ ವಲಯದ ಕಾರ್ಮಿಕರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇಲ್ಲಿಯವರೆಗೆ ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸು 58 ಆಗಿತ್ತು. 60ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.
ಚಿತ್ರಮಂದಿರ ದರ ಗರಿಷ್ಠ ₹ 200
ಮಲ್ಟಿಪ್ಲೆಕ್ಸ್ ಮತ್ತು ಎಲ್ಲ ಚಿತ್ರಮಂದಿರಗಳಲ್ಲಿ ಗರಿಷ್ಠ ಪ್ರವೇಶ ದರ ₹200ಕ್ಕೆ ನಿಗದಿ ಮಾಡಲಾಗಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗ ಳಲ್ಲಿನ ಪ್ರಮುಖ ಪ್ರದರ್ಶನ ಅವಧಿಯಲ್ಲಿ ಕನಿಷ್ಠ 1 ಚಿತ್ರಮಂದಿರದಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ಕಡ್ಡಾಯಗೊಳಿಸಲಾಗಿದೆ.
ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ
ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ಬರಲಿದೆ. ಇಲ್ಲಿಯವರೆಗೆ ಶೇ 4ರ ಬಡ್ಡಿದ ರದಲ್ಲಿ ಸಾಲ ನೀಡಲಾಗುತ್ತಿತ್ತು.
ಉತ್ತರಕರ್ನಾಟಕಕ್ಕೆ ಹೆಚ್ಚು ತಾಲ್ಲೂಕು
ನೂತನವಾಗಿ ರಚಿಸಲು ಉದ್ದೇಶಿಸಿರುವ 49 ತಾಲ್ಲೂಕುಗಳ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸಿಂಹಪಾಲು ಲಭ್ಯವಾಗಿದೆ.
ವಿಜಯಪುರ ಜಿಲ್ಲೆಗೆ 7, ಕಲಬುರ್ಗಿ ಜಿಲ್ಲೆಗೆ 4, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ 3 ತಾಲ್ಲೂಕು ರಚನೆಗಳ ಭಾಗ್ಯ ಸಿಕ್ಕಿದೆ. ದಕ್ಷಿಣದ ಜಿಲ್ಲೆಗಳ ಪೈಕಿ ಉಡುಪಿಗೆ ಮಾತ್ರ 3 ತಾಲ್ಲೂಕುಗಳು ಸಿಕ್ಕಿವೆ.
ಆರ್ಥಿಕ ವೃದ್ಧಿ ದರ ಕುಸಿತ
ಬೆಂಗಳೂರು: 2016–17ನೇ ಸಾಲಿನಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 0.4ರಷ್ಟು ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.
ಎರಡು ವರ್ಷಗಳಿಂದ ಕಂಡು ಬಂದಿರುವ ನಿರಂತರ ಬರಗಾಲ ಮತ್ತು ನೋಟು ರದ್ದತಿಯ ಪರಿಣಾಮವಾಗಿ ಆರ್ಥಿಕ ವೃದ್ಧಿ ದರವು ಕಡಿಮೆಯಾಗಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಬಜೆಟ್ ಜತೆಗೆಯೇ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಈ ವಿವರಗಳಿವೆ.
ಕೈಗಾರಿಕಾ ಮತ್ತು ಸೇವಾ ವಲಯದ ಬೆಳವಣಿಗೆ ಕುಂಠಿತ ಗೊಂಡಿದ್ದೇ ಇದಕ್ಕೆ ಮುಖ್ಯ ಕಾರಣ ಎಂದೂ ಸಮೀಕ್ಷೆ ಹೇಳಿದೆ.
* ಯಾವುದೇ ಜನಪರ ಸರ್ಕಾರ ಅಭಿವೃದ್ಧಿ ವಿರೋಧಿ ಎಂಬ ಬಾಲಿಶ ಕಲ್ಪನೆ ವಿತ್ತೀಯ ವಲಯದಲ್ಲಿದೆ. ಅದನ್ನು ಒಡೆದು ಹಾಕುವಲ್ಲಿ ನನ್ನ ಸರ್ಕಾರ ಯಶಸ್ವಿಯಾಗಿದೆ
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಮುಖ್ಯಾಂಶ:
ಹೊಸದಾಗಿ 49 ತಾಲ್ಲೂಕು ರಚನೆ * ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ * 30 ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟಿನ್* ಅನ್ನಭಾಗ್ಯದ ಅಕ್ಕಿ 2 ಕೆ.ಜಿ ಹೆಚ್ಚಳ* ರಾಯಚೂರಿಗೆ ನೂತನ ವಿಶ್ವವಿದ್ಯಾಲಯ* ದಾವಣಗೆರೆ, ರಾಮನಗರ, ತುಮಕೂರು, ವಿಜಯಪುರ, ಕೋಲಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ* ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ₹175 ಕೋಟಿ ಅನುದಾನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.