ADVERTISEMENT

ದ.ಕ. ಜಿಲ್ಲಾಧಿಕಾರಿ ಕಾರಿಗೆ ಡಿಕ್ಕಿ: ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 13:05 IST
Last Updated 23 ಜುಲೈ 2016, 13:05 IST
ಗುಂಡ್ಯ ಸಮೀಪ ಶನಿವಾರ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಫಾರ್ಚುನರ್‌ ಮತ್ತು ಸ್ಕಾರ್ಪಿಯೊ
ಗುಂಡ್ಯ ಸಮೀಪ ಶನಿವಾರ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಫಾರ್ಚುನರ್‌ ಮತ್ತು ಸ್ಕಾರ್ಪಿಯೊ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸಂಚರಿಸುತ್ತಿದ್ದ ಟೊಯೊಟೊ ಫಾರ್ಚುನರ್‌ ಕಾರಿಗೆ ಸ್ಕಾರ್ಪಿಯೊ ಡಿಕ್ಕಿ ಹೊಡೆದ ಘಟನೆ ಗುಂಡ್ಯ ಸಮೀಪ ಶನಿವಾರ ಸಂಜೆ 4ರ ಸುಮಾರಿಗೆ ಸಂಭವಿಸಿದ್ದು, ಜಿಲ್ಲಾಧಿಕಾರಿ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಉದನೆ–ಗುಂಡ್ಯ ನಡುವೆ ಈ ಅಪಘಾತ ಸಂಭವಿಸಿದೆ. ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಬೆಂಗಳೂರಿನತ್ತ ತೆರಳುತ್ತಿದ್ದರೆ, ಸ್ಕಾರ್ಪಿಯೊ ಬೆಂಗಳೂರಿನಿಂದ ಬರುತ್ತಿತ್ತು. ಸ್ಕಾರ್ಪಿಯೊದಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದೆ. ಇಬ್ರಾಹಿಂ ಅವರ ಪತ್ನಿ, ಕಾರಿನ ಚಾಲಕನಿಗೂ ಗಾಯವಾಗಿದೆ. ಎಲ್ಲರನ್ನೂ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಟ್ರಕ್‌ ಒಂದನ್ನು ಹಿಂದಿಕ್ಕುವ ಭರದಲ್ಲಿದ್ದ ಸ್ಕಾರ್ಪಿಯೊ ಎದುರಿನಿಂದ ಬರುತ್ತಿದ್ದ ಫಾರ್ಚುನರ್‌ ವಾಹನಕ್ಕೆ ಡಿಕ್ಕಿ ಹೊಡೆಯಿತು. ಸ್ಕಾರ್ಪಿಯೊದಲ್ಲಿದವರ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಅಪಘಾತದದಿಂದಾಗಿ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತು. ಅದೇ ದಾರಿಯಾಗಿ ತುಮಕೂರಿಗೆ ತೆರಳುತ್ತಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಶಶಿ ಬೆಳ್ಳಾಯರು, ಗಿರೀಶ, ಸುನಿಲ್ ಕೃಷ್ಣಾಪುರ, ಮನೋಹರ್ ಮತ್ತಿತರರು ರಸ್ತೆ ಸಂಚಾರ ಸುಗಮಗೊಳಿಸಲು ಶ್ರಮಿಸಿದರು. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT