ADVERTISEMENT

ನಂಜನಗೂಡು ದೊಡ್ಡ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 9:44 IST
Last Updated 1 ಏಪ್ರಿಲ್ 2015, 9:44 IST

ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದೊಡ್ಡ ಜಾತ್ರೆ ಪ್ರಯುಕ್ತ ಪಂಚ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ದೇವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ತಂದು ಪ್ರತ್ಯೇಕ ರಥಮಂಟಪದ ಪೀಠದ ಮೇಲೆ ಪ್ರತಿಷ್ಠಾಪಿಸಲಾಯಿತು.

ಅರ್ಚಕರು ಪೂಜಾ, ವಿಧಿ ವಿಧಾನಗಳನ್ನು ಪೂರೈಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಆವರಣದಿಂದ ಮೊದಲಿಗೆ ಸಂಪ್ರದಾಯದಂತೆ ಗಣಪತಿ ರಥವನ್ನು ಹೊರಡಿಸಲಾಯಿತು. ತದನಂತರ ಶ್ರೀಕಂಠೇಶ್ವರ ಸ್ವಾಮಿಯ ಬೃಹತ್ ರಥ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ರಥಗಳು ಹಿಂಬಾಲಿಸಿದವು.

ADVERTISEMENT

ಸುಮಾರು 95 ಅಡಿ ಎತ್ತರ, 50 ಟನ್‌ಗೂ ಅಧಿಕ ಭಾರದ ಶ್ರೀಕಂಠೇಶ್ವರ ಬೃಹತ್ ರಥವನ್ನು ದಾರಿ ಉದ್ದಕ್ಕೂ ಜೈಕಾರ ಹಾಕುತ್ತಾ ಭಕ್ತಜನರು ಸಂಭ್ರಮ, ಸಡಗರದಿಂದ ಎಳೆದು ತಂದರು. ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ತೇರಿಗೆ ಹಣ್ಣು-ಜವನ ಎಸೆದು ಭಕ್ತಿ ಮೆರೆದರು.

ಶಂಕರಮಠದ ಬಳಿ ದೊಡ್ಡ ರಥ ಹರಿಯುತ್ತಿದ್ದ ವೇಳೆ ರಸ್ತೆಯಲ್ಲಿ ಗುಂಡಿಬಿದ್ದು ರಥದ ಚಕ್ರ ಗುಂಡಿಯಲ್ಲಿ ಸಿಲುಕಿಕೊಂಡಿತು. ಬಳಿಕ ಕ್ರೇನ್‌ ನೆರವಿನಿಂದ ರಥವನ್ನು ಮುಂದಕ್ಕೆಳೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.