ಬೆಂಗಳೂರು: ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ಅವರನ್ನು ‘ರಕ್ಷಿಸಲು’ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್ ಅವರ ಆಪ್ತ ಕಾರ್ಯದರ್ಶಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
‘ನರೇಶ್ ಶೆಣೈ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಯು.ಟಿ. ಖಾದರ್ ಅವರ ಆಪ್ತ ಕಾರ್ಯದರ್ಶಿ ಮಂಗಳೂರು ಕಾರಾಗೃಹದ ಜೈಲರ್ ಮೇಲೆ ಒತ್ತಡ ತಂದಿದ್ದು, ತಾವು ಹೇಳಿದಂತೆ ಕೇಳದಿದ್ದರೆ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ವಿಚಾರವಾದಿಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಆರೋಪಿಸಿದ್ದಾರೆ.
ಖಾದರ್ ಏನೆನ್ನುತ್ತಾರೆ?
ನರೇಂದ್ರ ನಾಯಕ್ ಅವರ ಆರೋಪದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ‘ಇದೆಲ್ಲವೂ ಸುಳ್ಳು’ ಎಂದು ತಿಳಿಸಿದರು.
‘ಆರೋಪ ಕೇಳಿ ಬಂದ ಕೂಡಲೇ ನನ್ನ ಆಪ್ತ ಕಾರ್ಯದರ್ಶಿ ಅವರನ್ನು ವಿಚಾರಿಸಿದೆ. ಇದೆಲ್ಲ ಸುಳ್ಳು ಎಂದು ಅವರು ಹೇಳಿದರು. ಮಂಗಳೂರಿನ ಜೈಲರ್ ಮತ್ತು ಪೊಲೀಸ್ ಕಮಿಷನರ್ ಅವರಿಗೂ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದೇನೆ. ಅಂತಹ ಯಾವುದೇ ಬೆದರಿಕೆ, ಒತ್ತಡ ಬಂದಿಲ್ಲವೆಂದು ಜೈಲರ್ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಕೊಡುವಂತೆ ಕಮಿಷನರ್ ಅವರಿಗೆ ಸೂಚಿಸಿದ್ದೇನೆ’ ಎಂದು ಖಾದರ್ ಹೇಳಿದರು.
‘ಮಂಗಳೂರಿನಲ್ಲಿ ಯಾವುದೇ ವಿವಾದವಾದರೂ ನನ್ನ ಹೆಸರು ತರುತ್ತಾರೆ. ಅಲ್ಲಿನ ಕೆಲವರಿಗೆ ಇದೇ ಕೆಲಸವಾಗಿದೆ. ಈ ಪ್ರಕರಣದಲ್ಲಿ ನನ್ನ ಪ್ರಭಾವ ಏನೂ ಇಲ್ಲ’ ಎಂದು ಖಾದರ್ ತಿಳಿಸಿದ್ದಾರೆ.
</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.