ADVERTISEMENT

ನಾಲ್ಕು ಕೋಟಿ ಮಂದಿಗೆ ಅನ್ನಭಾಗ್ಯ: ಉಮಾಶ್ರೀ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 7:19 IST
Last Updated 24 ಸೆಪ್ಟೆಂಬರ್ 2017, 7:19 IST
ಮಹಾಲಿಂಗಪುರದ ದುರ್ಗಾದೇವಿ ದೇವಸ್ಥಾನದಲ್ಲಿ ‘ಮನೆ -ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ನಂತರ ಸಾರ್ವಜನಿಕ ಸಮಾರಂಭದಲ್ಲಿ ಸಚಿವೆ ಉಮಾಶ್ರೀ ಮಾತನಾಡಿದರು
ಮಹಾಲಿಂಗಪುರದ ದುರ್ಗಾದೇವಿ ದೇವಸ್ಥಾನದಲ್ಲಿ ‘ಮನೆ -ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ನಂತರ ಸಾರ್ವಜನಿಕ ಸಮಾರಂಭದಲ್ಲಿ ಸಚಿವೆ ಉಮಾಶ್ರೀ ಮಾತನಾಡಿದರು   

ಮಹಾಲಿಂಗಪುರ: ‘ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ 165 ಆಶ್ವಾಸನೆಗಳನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಜನತೆಗೆ ನೀಡಿದ ಆಶ್ವಾಸನೆಗಳಲ್ಲಿ ಈಗ 155 ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ರಾಜ್ಯದಲ್ಲಿ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಅತ್ಯಂತ ಜನಪ್ರಿಯವಾಗಿದ್ದು, ನಾಲ್ಕು ಕೋಟಿ ಜನರನ್ನು ತಲುಪಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದರು.

ದುರ್ಗಾ ದೇವಿ ದೇವಸ್ಥಾನದಲ್ಲಿ ‘ಮನೆ– ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

‘ರಾಜ್ಯದಲ್ಲಿ ರೈತರಿಗೆ, ಮಹಿಳಾ ಸ್ವ ಸಹಾಯ ಮಂಡಳಿಯ ಸದಸ್ಯರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಚಿಕ್ಕ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿದರದಲ್ಲಿ ಹಾಗೂ ಹಲವು ಬಡ್ಡಿ ರಹಿತ ಸಾಲಗಳನ್ನು ವಿತರಿಸಲಾಗುತ್ತಿದ್ದು ಇವುಗಳ ಫಲಾನುಭವಿಗಳು ಗೌರವಯುತ ಬದುಕು ಸಾಗಿಸುತ್ತಿದ್ದಾರೆ, ಶಿಕ್ಷಣ, ಸಮಾಜ ಕಲ್ಯಾಣ, ಯುವಜನತೆಗೆ ಹಾಗೂ ಹಿಂದುಳಿದ ವರ್ಗಗಳಿಗೆ ಅನೇಕ ಸವಲತ್ತುಗಳನ್ನು ಸರ್ಕಾರ ಒದಗಿಸಿದ್ದು ಎಲ್ಲವೂ ಕಾಂಗ್ರೆಸ್ಸಿನ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರಾಷ್ಟ್ರೀಕೃತ ಬ್ಯಾಂಕಿನಲ್ಲಿಯ ರೈತರ ಸಾಲ ಮನ್ನಾ ಮಾಡದಿರುವ ಸರ್ಕಾರ ರೈತ ವಿರೋಧಿಯಾಗಿದೆ. ಬಡವರಿಗೆ ಗ್ಯಾಸ್ ವಿತರಿಸುವ ಬಂಡವಾಳವನ್ನು ಇತರರಿಗೆ ನೀಡುತ್ತಿದ್ದ ಸಬ್ಸಿಡಿ ಹಣದಿಂದ ನೀಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನೂ ಇಲ್ಲ, ಸಾಧ್ಯವಾದರೆ, ಅವರು ರೈತರ ಸಾಲ ಮನ್ನಾ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಮುಖಂಡ ವಿಜಯಕುಮಾರ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಉಳ್ಳಾಗಡ್ಡಿ , ಪುರಸಭೆಯ ಅಧ್ಯಕ್ಷ ಬಸವರಾಜ ರಾಯರ, ಸದಸ್ಯರಾದ ಯಲ್ಲನಗೌಡ ಪಾಟೀಲ, ಜಾವೇದ ಭಾಗವಾನ, ಮಾಜಿ ಶಾಸಕ ಬಿ.ಜಿ. ಜಮಖಂಡಿ, ಅನೀಲ ಮಮದಾಪೂರ, ಸಯ್ಯದ ಯಾದವಾಡ, ಮಲ್ಲಪ್ಪ ಸಿಂಗಾಡಿ ಹಾಗೂ ಪುರಸಭಾ ಉಪಾಧ್ಯಕ್ಷೆ ಸವಿತಾ ದೊಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.