ಕಲಬುರ್ಗಿ: ‘ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪ್ರೊ.ಸಿ.ಎಸ್. ಪಾಟೀಲ ಅವರ ಹೆಸರನ್ನು ಪರಿಗಣಿಸುವುದು ಬೇಡ’ ಎಂದು ಈ ಹುದ್ದೆಯ ಮತ್ತೊಬ್ಬ ಆಕಾಂಕ್ಷಿ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಎಸ್.ಎಸ್. ಪಾಟೀಲ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
‘ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪ್ರೊ.ಸಿ.ಎಸ್. ಪಾಟೀಲ, ಈಶ್ವರ ಭಟ್ ಹಾಗೂ ನನ್ನ ಹೆಸರನ್ನು ಶೋಧನಾ ಸಮಿತಿ ಶಿಫಾರಸು ಮಾಡಿದೆ. ಆದರೆ, ಸಿ.ಎಸ್. ಪಾಟೀಲ ಅವರು ಈ ಹುದ್ದೆಗೆ ಬೇಕಿರುವ ಅರ್ಹತೆಯನ್ನೇ ಹೊಂದಿಲ್ಲ’ ಎಂದು ಅವರು ದೂರಿದ್ದಾರೆ.
‘ಕನಿಷ್ಠ 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವವರು ಮಾತ್ರ ಕುಲಪತಿ ಹುದ್ದೆಗೆ ಅರ್ಹರು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯ್ದೆಯಲ್ಲಿದೆ. ಆದರೆ, ಸಿ.ಎಸ್. ಪಾಟೀಲ ಅವರು ಪ್ರಾಧ್ಯಾಪಕರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಸಿ.ಎಸ್. ಪಾಟೀಲ ಅವರು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿದ್ದಾರೆ.
ಶೋಧನಾ ಸಮಿತಿ ಕುಲಪತಿ ಹುದ್ದೆಗೆ ಶಿಫಾರಸು ಮಾಡಿರುವ ಮೂವರಲ್ಲಿ ಪ್ರೊ.ಸಿ.ಎಸ್. ಪಾಟೀಲ ಅವರ ಹೆಸರೂ ಇದೆ. ಇದನ್ನು ನೋಡಿದರೆ ಇದೆಲ್ಲವೂ ಪೂರ್ವ ನಿಯೋಜಿತದಂತೆ ಗೋಚರಿಸುತ್ತಿದೆ’ ಎಂದು ಅವರು ಆಪಾದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.