ಬೆಂಗಳೂರು (ಪಿಟಿಐ): ಮಂಗಳ ನೌಕೆಯ ಪಥ ಸರಿಪಡಿಸುವಿಕೆ ಮತ್ತು ಮುಖ್ಯ ದ್ರವ ಎಂಜಿನ್ನಿನ ದಹನಶೀಲತೆಯ ಪರೀಕ್ಷೆ ಸೋಮವಾರ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೊ ಹೇಳಿದೆ.
ಮಂಗಳ ನೌಕೆ ಕಕ್ಷೆ ಪ್ರವೇಶಿಸುವುದಕ್ಕೆ ಪೂರ್ವಭಾವಿಯಾಗಿ ಈ ಪರೀಕ್ಷೆ ನಡೆಸಬೇಕಿತ್ತು. ವಿಜ್ಞಾನಿಗಳು ಇದನ್ನು ಅಗ್ನಿಪರೀಕ್ಷೆ ಎಂದೇ ಕರೆದಿದ್ದರು.
‘ನೌಕೆಯ ಪಥವನ್ನು ನಾಲ್ಕನೇ ಬಾರಿಗೆ ಸರಿಪಡಿಸಲು ಈ ಪರೀಕ್ಷೆ ನಡೆಸಬೇಕಿತ್ತು. ಸುಮಾರು 4 ಸೆಕೆಂಡುಗಳ ಕಾಲ ದ್ರವ ಎಂಜಿನ್ ಉರಿಸುವ ಈ ಪರೀಕ್ಷೆ ಯಶಸ್ವಿಯಾಗಿದೆ' ಎಂದು ಇಸ್ರೊ ಸ್ಪಷ್ಟಪಡಿಸಿದೆ.
300 ದಿನಗಳಿಂದ ನಿದ್ರಾವಸ್ಥೆಯಲ್ಲಿ ಇರಿಸಲಾಗಿರುವ ಎಂಜಿನ್ ಮತ್ತೆ ಸರಿಯಾಗಿ ಉರಿಯಲಿದೆಯೇ ಎಂಬುದೇ ಕುತೂಹಲದ ವಿಷಯವಾಗಿತ್ತು.
ಸೆ.24 ರಂದು ನೌಕೆ ಮಂಗಳನ ಕಕ್ಷೆ ಸೇರಲಿದೆ. ಸದ್ಯ ಪ್ರತಿ ಸೆಕೆಂಡ್ಗೆ 22.1 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ನೌಕೆ ವೇಗ ಪ್ರತಿ ಸೆಕೆಂಡ್ಗೆ 4.4 ಕಿ.ಮೀಗೆ ತಗ್ಗಲಿದೆ. ಈ ವೇಗವನ್ನು ತಗ್ಗಿಸಲು ಎಂಜಿನ್ ಅನ್ನು 24 ನಿಮಿಷಗಳ ಕಾಲ ಹೆಚ್ಚುವರಿಯಾಗಿ ಉರಿಸಬೇಕಾಗುತ್ತದೆ ಎಂದೂ ಇಸ್ರೊ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.