ADVERTISEMENT

ಮಕ್ಕಳನ್ನು ಕೊಂದ ತಂದೆಗೆ ಗಲ್ಲು ಶಿಕ್ಷೆ ಕಾಯಂ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:51 IST
Last Updated 22 ಸೆಪ್ಟೆಂಬರ್ 2017, 19:51 IST

ಬೆಂಗಳೂರು: ತನ್ನ ಇಬ್ಬರು ಮಕ್ಕಳನ್ನು ಸಂಪಿಗೆ ತಳ್ಳಿ ಕೊಂದ ಆರೋಪದ ಮೇರೆಗೆ ತುಮಕೂರಿನ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ಮ್ಯಾನೇಜರ್‌ ಎ. ರಮೇಶ್ ನಾಯಕ್ ಎಂಬಾತನಿಗೆ ತುಮಕೂರು ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋ‌ರ್ಟ್     ಎತ್ತಿ ಹಿಡಿದಿದೆ.

ಈ ಕುರಿತಂತೆ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್‌ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಮುಗ್ಧ ಮಕ್ಕಳನ್ನು ಯಾವುದೇ ಕಾರಣವಿಲ್ಲದೆ ಕೊಲೆ ಮಾಡಿರುವುದು ಹೇಯ ಕೃತ್ಯ. ಆದ್ದರಿಂದ ಅಪರಾಧಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಲಾಗುತ್ತಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ನಾಯಕ್ 2010ರ ಮೇ 16ರಂದು ಸಂಜೆ 7 ಗಂಟೆ ಸಮಯದಲ್ಲಿ ತಮ್ಮ ಇಬ್ಬರು ಮಕ್ಕಳಾದ ಭುವನ್‌ ರಾಜ್ (10 ವರ್ಷ) ಹಾಗೂ ಕೃತ್ತಿಕಾ (ಮೂರುವರೆ ವರ್ಷ) ಅವರನ್ನು ಪುತ್ತೂರು ತಾಲ್ಲೂಕಿನ ಪಂಜಾದ ಸತ್ಯನಾರಾಯಣ ಎಂಬುವರ ಅಡಕೆ ತೋಟದ ಸಂಪಿನಲ್ಲಿ ಮಳುಗಿಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಈ ಸಂಬಂಧ ಅಪರಾಧಿಗೆ ತುಮಕೂರು ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.

ಅಪರಾಧಿ ಮಕ್ಕಳನ್ನು ಕೊಲೆ ಮಾಡುವ ಹಿಂದಿನ ದಿನವಷ್ಟೇ ತುಮಕೂರಿನಲ್ಲಿ ತನ್ನ ನಾದಿನಿ ಸವಿತಾ, ಅತ್ತೆ ಸರಸ್ವತಿ ಅವರನ್ನು ಕೊಲೆ ಮಾಡಿದ್ದರು. ನಾಯಕ್, ನಾದಿನಿಗೆ ಬೆಂಗಳೂರಿನ ಭವಿಷ್ಯ ನಿಧಿ ಇಲಾಖೆಯಲ್ಲಿ ಕೆಲಸ ಕೊಡಿಸಲು ನೆರವಾಗಿದ್ದರು. ಕೆಲಸಕ್ಕೆ ಸೇರಿದ ಬಳಿಕ ಸವಿತಾ ತನ್ನ ಸಹೋದ್ಯೋಗಿ ಜೊತೆ ಅನ್ಯೋನ್ಯತೆ ಹೊಂದಿದ್ದರು ಎಂಬ ಕಾರಣಕ್ಕೆ ರಮೇಶ್ ನಾಯಕ್‌ ಅತೃಪ್ತಿ ಹೊಂದಿದ್ದರು. ಇದರಿಂದ ಅವರಿಗೆ ನಾದಿನಿ ಮೇಲೆ ಕ್ರೋಧವಿತ್ತು’ ಎಂಬ ಅಂಶ ತನಿಖೆಯಲ್ಲಿ ಕಂಡು ಬಂದಿತ್ತು.

ಅತ್ತೆ ಮತ್ತು ನಾದಿನಿ ಕೊಲೆ ಪ್ರಕರಣದಲ್ಲಿ ಸೆಷನ್ಸ್‌ ನ್ಯಾಯಾಲಯ ರಮೇಶ್‌ ನಾಯಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸದ್ಯ ಆತನನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ. ನಾಯಕ್ ಪತ್ನಿಯೂ ನೌಕರಿಯಲ್ಲಿದ್ದಾರೆ.

ಪ್ರಾಸಿಕ್ಯೂಷನ್ ವಕೀಲ ವಿಜಯಕುಮಾರ ಮಜಗೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.