ADVERTISEMENT

‘ಮಾನ್ಯತೆ ಸಿಗುವವರೆಗೂ ಹೋರಾಟ’

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:24 IST
Last Updated 22 ಆಗಸ್ಟ್ 2017, 19:24 IST
ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಲಿಂಗಾಯತರ ಸಮಾವೇಶದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು
ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಲಿಂಗಾಯತರ ಸಮಾವೇಶದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು   

ಬೆಳಗಾವಿ: ಸ್ವತಂತ್ರ ಧರ್ಮ ಮಾನ್ಯತೆಗೆ ಹಕ್ಕೊತ್ತಾಯ ಮಂಡಿಸಿ ನಗರದಲ್ಲಿ ಮಂಗಳವಾರ ನಡೆದ ಲಿಂಗಾಯತರ ಬೃಹತ್‌ ಸಮಾವೇಶದಲ್ಲಿ, ‘ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂಬ ಪ್ರತಿಜ್ಞೆ ಸ್ವೀಕರಿಸಲಾಯಿತು.

ರಾಜ್ಯ ಸರ್ಕಾರವು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ಬಿಜೆಪಿಯ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಿಸಬೇಕು ಎಂದು ಆಗ್ರಹಿಸಲಾಯಿತು. ಸಮಾಜದ ಹೋರಾಟ ಬೆಂಬಲಿಸದ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಸಂದೇಶವನ್ನೂ ಸಮಾವೇಶ ರವಾನಿಸಿತು.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಬೃಹತ್‌ ಸಂಖ್ಯೆಯಲ್ಲಿ ಬಂದಿದ್ದ ಲಿಂಗಾಯತರು, ‘ಸ್ವತಂತ್ರ ಧರ್ಮ ನಮ್ಮೆಲ್ಲರ ಆದ್ಯತೆ’, ‘ಲಿಂಗಾಯತ ವ್ಯಕ್ತಿ ದೇಶಕ್ಕೊಂದು ಶಕ್ತಿ’, ‘ಭಾರತ ದೇಶ ಜೈ ಬಸವೇಶ’ ಎನ್ನುವ ಘೋಷಣೆಗಳನ್ನು ಮೊಳಗಿಸಿ, ಶಕ್ತಿ ಪ್ರದರ್ಶಿಸಿದರು.

ಲಿಂಗರಾಜ ಕಾಲೇಜು ಮೈದಾನದಲ್ಲಿ ಮೂರು ತಾಸು ನಡೆದ ಸಮಾವೇಶದಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೇ, ಕೆಲ ಕಾಲ ಸುರಿದ ತುಂತುರು ಮಳೆಗೂ ಜಗ್ಗದೇ ಪಾಲ್ಗೊಂಡರು. ಬಹುತೇಕರು ಶ್ವೇತವಸ್ತ್ರಧಾರಿಗಳಾಗಿ ಬಂದಿದ್ದರು. ‘ಲಿಂಗಾಯತ ಸ್ವತಂತ್ರ ಧರ್ಮ’ ಎಂದು ಬರೆದಿದ್ದ ಟೋಪಿಗಳನ್ನು ಧರಿಸಿದ್ದರು. ಷಟ್‌ಸ್ಥಲ ಧ್ವಜ, ಬಸವಣ್ಣನ ಭಾವಚಿತ್ರವಿದ್ದ ಧ್ವಜಗಳು ಹಾಗೂ ಘೋಷಣಾ  ಫಲಕಗಳನ್ನು ಹಿಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.