ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಮುತ್ತೋಡಿ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ಮುತ್ತೋಡಿ ಪ್ರಾದೇಶಿಕ ವಲಯದ ಅತ್ತಿಗುಂಡಿ ವಿಭಾಗದಲ್ಲಿ ಮಂಗಳವಾರ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ.
ಅತ್ತಿಗುಂಡಿ ವಿಭಾಗದ ಏಳುನೂರು ಖಾನ್ ಬೆಟ್ಟದಲ್ಲಿ ಮಧ್ಯಾಹ್ನದಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಮುತ್ತೋಡಿ ವಲಯದ ಸೀಗೆಖಾನ್ ಮೇಲ್ಭಾಗದ ಪ್ರದೇಶದವರೆಗೂ ಸಂಜೆ ಹೊತ್ತಿಗೆ ಬೆಂಕಿ ವ್ಯಾಪಿಸಿದೆ. ಮಲ್ಲಂದೂರು ಸಮೀಪದ ಮಸಗಲಿ ಮೀಸಲು ಅರಣ್ಯದಲ್ಲೂ ಸಹ ಕಿಡಿಗೇಡಿಗಳು ಹಚ್ಚಿರುವ ಬೆಂಕಿಗೆ ಅರಣ್ಯ ಹೊತ್ತಿ ಉರಿಯುತ್ತಿದೆ.
‘ಏಳುನೂರು ಖಾನ್ ಬೆಟ್ಟ ಮತ್ತು ಸೀಗೆಖಾನ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಬೆಂಕಿಗೆ ಶೋಲಾ ಹುಲ್ಲುಗಾವಲು ಸುಟ್ಟು ಹೋಗಿದೆ. ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಕಿ ನಿಯಂತ್ರಣಕ್ಕೆ ಬಂದಿದೆ’ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.