ಹುಬ್ಬಳ್ಳಿ: ‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಮಾರ್ಚ್ 14ರಂದು ಸಚಿವ ಸಂಪುಟ ಸಭೆ ನಡೆಸಿ, ಒಮ್ಮತದ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
‘ಪ್ರತ್ಯೇಕ ಧರ್ಮ ಮಾನ್ಯತೆಯ ಕುರಿತು ಸಚಿವರಲ್ಲಿ ಭಿನ್ನಾಭಿಪ್ರಾಯ ಮತ್ತು ಗೊಂದಲ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಮಹದಾಯಿ ವಿಚಾರವಾಗಿ ನ್ಯಾಯಾಧೀಕರಣದಲ್ಲಿ ವಿಚಾರಣೆ ಮುಗಿದಿದೆ. ಶ್ರೀಘ್ರದಲ್ಲೇ ತೀರ್ಪು ಹೊರ ಬೀಳಲಿದೆ. ಕರ್ನಾಟಕದಿಂದ ಸಮರ್ಪಕವಾಗಿ ವಾದ ಮಂಡಿಸಲಾಗಿದೆ. ಹೀಗಾಗಿ ಮಹದಾಯಿ ವಿಚಾರವಾಗಿ ರಾಜ್ಯಕ್ಕೆ ಲಾಭವಾಗಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.
‘ಕಾನೂನು ವಿಶ್ವವಿದ್ಯಾಲಯ ಕುಲಪತಿ ನೇಮಕಕ್ಕೆ ಸಲ್ಲಿಸಿದ ಎರಡು ಪ್ರಸ್ತಾವನೆಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಮೂರನೇ ಪ್ರಸ್ತಾವನೆ ರಾಜ್ಯಪಾಲರ ಮುಂದಿದೆ. ಶೀಘ್ರದಲ್ಲೇ ಕಾನೂನು ವಿವಿಗೆ ಕುಲಪತಿಗಳ ನೇಮಕ ಮಾಡಲಾಗುವುದು’ ಎಂದು ತಿಳಿಸಿದರು.
ಲೋಕಾಯುಕ್ತರ ಮೇಲಿನ ಹಲ್ಲೆ ವಿಚಾರ: ‘ಇದನ್ನು ಭದ್ರತಾ ವೈಫಲ್ಯ ಎನ್ನಲು ಆಗುವುದಿಲ್ಲ. ಲೋಕಾಯುಕ್ತ ಒಂದು ಸಾರ್ವಜನಿಕ ಸಂಸ್ಥೆ, ಅಲ್ಲಿ ಪ್ರತಿಯೊಬ್ಬರನ್ನು ಸಂಶಯದಿಂದ ನೋಡಲು ಆಗುವುದಿಲ್ಲ. ಇಂತಹ ಘಟನೆ ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.