ADVERTISEMENT

ಶರಾವತಿ ಅಭಯಾರಣ್ಯ ಬಳಿ ಭೂಗತ ಜಲವಿದ್ಯುತ್‌ ಯೋಜನೆ

ಗೇರುಸೊಪ್ಪ ಜಲಾಶಯದಿಂದ ತಳಕಳಲೆಗೆ ನೆಲದಡಿ ಪೈಪ್‌ಲೈನ್ ಅಳವಡಿಕೆ

ಎಂ.ರಾಘವೇಂದ್ರ
Published 3 ಡಿಸೆಂಬರ್ 2017, 20:18 IST
Last Updated 3 ಡಿಸೆಂಬರ್ 2017, 20:18 IST
ಶರಾವತಿ ಅಭಯಾರಣ್ಯ ಬಳಿ ಭೂಗತ ಜಲವಿದ್ಯುತ್‌ ಯೋಜನೆ
ಶರಾವತಿ ಅಭಯಾರಣ್ಯ ಬಳಿ ಭೂಗತ ಜಲವಿದ್ಯುತ್‌ ಯೋಜನೆ   

ಸಾಗರ: ಶರಾವತಿ ಅಭಯಾರಣ್ಯ ಸಮೀಪದಲ್ಲಿ ಸುಮಾರು ₹ 5,000 ಕೋಟಿ ವೆಚ್ಚದಲ್ಲಿ 2,000 ಮೆಗಾವಾಟ್‌ ಸಾಮರ್ಥ್ಯದ ಭೂಗತ ಜಲವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳಲು ಕರ್ನಾಟಕ ವಿದ್ಯುತ್ ನಿಗಮ ಚಿಂತನೆ ನಡೆಸಿದೆ. ಇನ್ನೊಂದೆಡೆ ಜೀವವೈವಿಧ್ಯದ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟದಲ್ಲಿ ಬೃಹತ್‌ ಯೋಜನೆ ಕೈಗೊಳ್ಳುವುದಕ್ಕೆ ಪರಿಸರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯದಿಂದ ಸಾಗರ ತಾಲ್ಲೂಕಿನ ತಳಕಳಲೆ ಜಲಾಶಯಕ್ಕೆ ಸುರಂಗ ಮಾರ್ಗದ ಮೂಲಕ ಪೈಪ್‌ಲೈನ್‌ ಅಳವ
ಡಿಸಿ ನೀರನ್ನು ಎತ್ತಿ ಪುನಃ ಗೇರುಸೊಪ್ಪ ಜಲಾಶಯಕ್ಕೆ ಹರಿಸಿ, ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ನಿಗಮ ಹೊಂದಿದೆ. ಈ ಯೋಜನೆಯ ಅನುಷ್ಠಾ
ನದ ಪೂರ್ವ ಕಾಮಗಾರಿಗೆ ಆಗಸ್ಟ್‌ 9ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡಿದೆ.

ತಳಕಳಲೆಯಿಂದ ಗೇರುಸೊಪ್ಪದವರೆಗೆ 3.8 ಕಿ.ಮೀ. ಉದ್ದದ ಎರಡು ಸುರಂಗ ಮಾರ್ಗಗಳನ್ನು ನೆಲದ ಅಡಿ 312 ಮೀಟರ್‌ ಆಳದಲ್ಲಿ ಕೊರೆ
ಯಲು ಉದ್ದೇಶಿಸಲಾಗಿದೆ. 300ಮೀ. ಉದ್ದದ, 22 ಮೀ. ಅಗಲದ, 52ಮೀ. ಎತ್ತರದ ಪವರ್‌ ಸ್ಟೇಷನ್‌ ಅನ್ನು ಭೂಗತವಾಗಿ ನಿರ್ಮಿಸಲಾಗುತ್ತದೆ. ಈ ಯೋಜನೆಯಿಂದ ಜೋಗ, ಲಿಂಗನಮಕ್ಕಿ, ಅಘನಾಶಿನಿ ವ್ಯಾಪ್ತಿಯಲ್ಲಿ ಬರುವ ಪಶ್ಚಿಮಘಟ್ಟದಲ್ಲಿರುವ 371 ಎಕರೆ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕುತ್ತು ಬರಲಿದೆ ಎಂಬ ಆತಂಕ ಪರಿಸರ ಪ್ರೇಮಿಗಳನ್ನು ಕಾಡುತ್ತಿದೆ.

ADVERTISEMENT

ಶರಾವತಿ ಅಭಯಾರಣ್ಯ ಪ್ರದೇಶದಿಂದ ಕೇವಲ 3.5 ಕಿ.ಮೀ. ದೂರದಲ್ಲಿ ಉದ್ದೇಶಿತ ಯೋಜನಾ ಪ್ರದೇಶವಿದೆ. ಇದನ್ನು ಈಗಾಗಲೇ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಕಸ್ತೂರಿ ರಂಗನ್ ವರದಿಯ ಶಿಫಾರಸಿನ ಪ್ರಕಾರ ಇಲ್ಲಿ ಯಾವುದೇ ಹೊಸ ಯೋಜನೆ ಕೈಗೊಳ್ಳಲು ಅವಕಾಶವಿಲ್ಲ. ಆದರೂ, ನೂತನ ಜಲ ವಿದ್ಯುತ್‌ ಯೋಜನೆಯ ಪೂರ್ವಭಾವಿ ಕಾಮಗಾರಿ ಕೈಗೊಳ್ಳಲು ಪರಿಸರ ಇಲಾಖೆ ಅನುಮತಿ ನೀಡಿರುವುದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ದೇಶಿತ ಯೋಜನಾ ಪ್ರದೇಶದಲ್ಲಿ ನಿತ್ಯಹರಿದ್ವರ್ಣ ಅರಣ್ಯ ಪ್ರದೇಶ ಬರುತ್ತದೆ. ಇಲ್ಲಿ ಅಪರೂಪದ ಜೀವವೈವಿಧ್ಯ, ಔಷಧೀಯ ಸಸ್ಯಗಳು, ಹುಲಿ, ಚಿರತೆ, ಜಿಂಕೆ, ಕಾಡುಕೋಣ, ಕಾಳಿಂಗ ಸರ್ಪಗಳಿವೆ. ಪ್ರಪಂಚದ ಬೇರೆ ಯಾವುದೇ ಪ್ರದೇಶದಲ್ಲೂ ಕಾಣಿಸಿಕೊಳ್ಳದ ಸಿಂಹ ಬಾಲದ ಸಿಂಗಳೀಕ ಕೂಡ ಇಲ್ಲಿ ಪತ್ತೆಯಾಗಿದೆ.

ಸುರಂಗ ನಿರ್ಮಿಸಲು ಸ್ಫೋಟಕಗಳನ್ನು ಬಳಸಬೇಕಾಗುತ್ತದೆ. ಆಗ ಪ್ರಾಣಿ–ಪಕ್ಷಿಗಳು ಬದುಕುಳಿಯುವುದು ಕಷ್ಟಸಾಧ್ಯ. ಅಲ್ಲದೇ ಕಾಡಿನ ನಡುವೆ ರಸ್ತೆ ನಿರ್ಮಿಸಲು ಅಪಾರ ಪ್ರಮಾಣದಲ್ಲಿ ಮರಗಳನ್ನು ಕಡಿಯಬೇಕಾಗುತ್ತದೆ. ಈ ಬೃಹತ್‌ ಯೋಜನೆ ಕೈಗೊಳ್ಳುವ ಮೊದಲು ಅದರ ಸಾಧಕ–ಬಾಧಕಗಳ ಕುರಿತು ಸ್ಥಳೀಯ ನಿವಾಸಿಗಳು, ಸಂಘ-ಸಂಸ್ಥೆಗಳೊಂದಿಗೆ ಕರ್ನಾಟಕ ವಿದ್ಯುತ್‌ ನಿಗಮ ಚರ್ಚಿಸಬೇಕಿತ್ತು ಎಂಬುದು ಪರಿಸರ ಹೋರಾಟಗಾರರ ವಾದ.

ಗೇರುಸೊಪ್ಪದಿಂದ ತಳಕಳಲೆ ಜಲಾಶಯ 480 ಮೀ. ಎತ್ತರದಲ್ಲಿದೆ. ಅಲ್ಲಿಂದ ನೀರನ್ನು ಪಂಪ್‌ ಮಾಡಲು ಅಗಾಧ ಪ್ರಮಾಣದ ವಿದ್ಯುತ್‌ ಅವಶ್ಯ
ಕತೆ ಇದೆ. ಕಾಮಗಾರಿ ಕೈಗೊಂಡ ಬಳಿಕ ಯೋಜನೆಯ ಗುರಿಯಷ್ಟು ಪ್ರಮಾಣ
ದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲು ಸಾಧ್ಯವೇ ಎಂಬುದು ವಿದ್ಯುತ್‌ ಕ್ಷೇತ್ರದ ತಜ್ಞರ ಪ್ರಶ್ನೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಯೋಜನೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಪರಿಸರ ಹೋರಾಟಗಾರರು ಚಿಂತನೆ ನಡೆಸಿದ್ದಾರೆ.

ಶರಾವತಿ ಜಲಾನಯನ ಪ್ರದೇಶದಲ್ಲಿ ಜಲ ವಿದ್ಯುತ್‌ ಯೋಜನೆಯಿಂದ ಈಗಾಗಲೇ ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ. ಪ್ರಾಕೃತಿಕ ಅಸಮತೋ
ಲನ ಈ ಭಾಗದ ಜನರನ್ನು ಕಾಡುತ್ತಿದೆ. ನೂತನ ಯೋಜನೆ ಕೈಗೊಳ್ಳುವ ಮೊದಲು ಪಶ್ಚಿಮಘಟ್ಟದ ಸಮೃದ್ಧ ಅರಣ್ಯ ಪ್ರದೇಶಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಯೋಜನೆ ಎಷ್ಟರಮಟ್ಟಿಗೆ ಕಾರ್ಯಸಾಧು ಎಂಬ ಬಗ್ಗೆ ಪುನರ್‌ ಪರಿಶೀಲನೆ ನಡೆಸಬೇಕು ಎಂಬುದು ಮಲೆನಾಡಿನ ಜನರ ಒತ್ತಾಯ.

ಮಲೆನಾಡು ಈಗಾಗಲೇ ಅರಣ್ಯ ನಾಶದಿಂದ ತತ್ತರಿಸುತ್ತಿದೆ. ಇಂಥ ಸಂದರ್ಭದಲ್ಲಿ ಪರಿಸರ ಉಳಿಸಿಕೊಂಡು ಹೊಸ ಯೋಜನೆ ರೂಪಿಸುವ ಬಗ್ಗೆ ಚಿಂತಿಸಬೇಕು.
-ನಾ.ಡಿಸೋಜ, ಸಾಹಿತಿ

ಇದೇ ಹಣವನ್ನು ಸೌರವಿದ್ಯುತ್‌ ಯೋಜನೆಗೆ ಬಳಸಿಕೊಳ್ಳಲಿ. ರಾಜಕಾರಣಿ, ಅಧಿಕಾರಿಗಳು ಹಣ ಮಾಡಲು ಈ ಯೋಜನೆ ರೂಪಿಸಿ<br/>ದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

-ಅಖಿಲೇಶ್‌ ಚಿಪ್ಪಳಿ, ಪರಿಸರ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.