ADVERTISEMENT

ಶಾಸಕ ನಾಗೇಂದ್ರ ಮತ್ತೆ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಐಎಲ್‌ಸಿ ಇಂಡಸ್ಟ್ರೀಸ್‌ ಕಂಪೆನಿಯು ಅಕ್ರಮವಾಗಿ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಸೇರಿದಂತೆ ಏಳು ಜನರನ್ನು ಬುಧವಾರ ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ.

ಕಾವೂರು ಸೋಮಶೇಖರ ಮಾಲೀತ್ವಕ ಐಎಲ್‌ಸಿ ಕಂಪೆನಿಯು ಬೇಲೆಕೇರಿ ಬಂದರಿನಿಂದ 2009ರಿಂದ 2010ರ ನಡುವೆ ಒಟ್ಟು 9.86 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದೆ ಎಂಬ ಆರೋಪ ಇದೆ. ಅಲ್ಲದೆ, ಇದರಲ್ಲಿ ದೊಡ್ಡ ಪ್ರಮಾಣದ ಅದಿರನ್ನು ಅರಣ್ಯ ಪ್ರದೇಶದಲ್ಲಿನ ಗಣಿಗಳಿಂದ ತೆಗೆಯಲಾಗಿದೆ ಎಂದು ಸಿಬಿಐ ಹೇಳಿದೆ.

ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್‌, ಎಫ್‌ಕೆ ಅಸೋಸಿಯೇಟ್ಸ್‌, ಗ್ರೀನ್‌ಟೆಕ್‌ ಮೈನಿಂಗ್‌, ನಾಗೇಂದ್ರ ಅವರ ಪಾಲುದಾರಿಕೆ ಹೊಂದಿರುವ ಈಗಲ್ ಟ್ರೇಡರ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಕಂಪೆನಿಗಳೂ ಐಎಲ್‌ಸಿ ಕಂಪೆನಿ ಅದಿರು ಪೂರೈಸಿವೆ ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕೆ. ನಾಗರಾಜ್, ಫರ್ಹಾನ್ ಶೇಖ್‌, ಅಜಯ್ ಖರ್ಬಂಡ, ರಾಣಿ ಸಮ್ಯುಕ್ತ, ನಂದಿನಿ ಮತ್ತು ಎರ್ರಿಬಾಬಾ ಎಂಬುವರು ಬಂಧಿತ ಇತರರು. ಇವರನ್ನು ಸಿಬಿಐ ವಿಶೇಷ ನ್ಯಾಯಾಲಯ ಜೂನ್‌ 8ರವರೆಗೆನ್ಯಾಯಾಂಗ ಬಂಧನಕ್ಕೆ ನೀಡಿದೆ.

ನಂದಿನಿ ಅವರು ಸ್ವಸ್ತಿಕ್ ನಾಗರಾಜ್‌ನ ಪತ್ನಿ ಎಂದು ಮೂಲಗಳು ತಿಳಿಸಿವೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಸ್ತಿಕ್‌ ನಾಗರಾಜ್‌ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

ಅಧಿಕಾರಿಗಳಿಗೆ ಮತ್ತು ಇತರರಿಗೆ ನೀಡಿದ ಲಂಚದ ಬಗ್ಗೆ ನಾಗರಾಜ್‌ ತನ್ನ ದಿನಚರಿಯಲ್ಲಿ ಬರೆದಿಡುತ್ತಿದ್ದ. ಅದರಲ್ಲಿನ ಕೈಬರಹ ನಂದಿನಿ ಅವರದ್ದು. ಹಾಗಾಗಿ ನಂದಿನಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.