ಮೈಸೂರು: ಶ್ರವಣಬೆಳಗೊಳದಲ್ಲಿ ನಡೆ ಯುವ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಬೇಕೆಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರನ್ನು ಶುಕ್ರವಾರ ಕೋರಲಾಯಿತು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಲ್. ಜನಾರ್ದನ್ ಅವರು ದೇವನೂರ ಮಹಾದೇವ ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿಕೊಂಡರು. ಆದರೆ, ತಾತ್ವಿಕ ಭಿನ್ನಾಭಿಪ್ರಾಯಗಳಿವೆ ಎಂದು ದೇವನೂರರು ಒಪ್ಪಿಕೊಳ್ಳಲಿಲ್ಲ. ‘10ನೇ ತರಗತಿಯವರೆಗೆ ಕನ್ನಡ ಭಾಷೆಯಲ್ಲಿಯೇ ಬೋಧಿಸಬೇಕು. ಇದಕ್ಕಾಗಿ ನಿರಂತರವಾಗಿ ಸರ್ಕಾರವನ್ನು ಸಾಹಿತ್ಯ ಪರಿಷತ್ ಒತ್ತಾಯಿಸಬೇಕು.
ಆದರೆ, ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ. ಸರ್ಕಾರದ ಅನುದಾನ ಪಡೆದು ಸಮ್ಮೇಳನ ಮಾಡುವುದರಿಂದ ಒತ್ತಾಯಿಸಲು ಕಷ್ಟವಾಗುತ್ತದೆ. ಸರ್ಕಾರದ ಅನುದಾನ ಬಿಟ್ಟು ಪರ್ಯಾಯ ಸಮ್ಮೇಳನ ಮಾಡೋಣ’ ಎಂದು ದೇವನೂರ ಹೇಳಿದರು. ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ತ್ರೈಮಾಸಿಕ ‘ಹೊಯ್ಸಳ ಸಿರಿ’ ಪತ್ರಿಕೆ ಸಂಪಾದಕ ಅರಕಲಗೂಡು ಜಯಕುಮಾರ್, ಡಾ.ವಿಜಯೇಂದ್ರ ಹಾಗೂ ಡಾ.ತಿಮ್ಮಯ್ಯ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.