ಹುಣಸೂರು: ಸಾಲಬಾಧೆ ತಾಳಲಾರದೆ ರೈತರೊಬ್ಬರು ತಮ್ಮ ಅವಳಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟರೆ, ಮಕ್ಕಳ ಸ್ಥಿತಿ ಗಂಭೀರವಾಗಿದೆ.
ತಾಲ್ಲೂಕಿನ ಬಿಳಿಕೆರೆ ಹೋಬಳಿ ಶ್ರವಣನಹಳ್ಳಿಯ ನಿವಾಸಿ ಸುಬ್ರಹ್ಮಣ್ಯ ಅವರೇ ಕ್ರಿಮಿನಾಶಕ ಮಾತ್ರೆ ಸೇವಿಸಿ ಮೃತಪಟ್ಟವರು. ಇವರ ಅವಳಿ ಪುತ್ರಿಯರಾದ 11 ವರ್ಷದ ಸೋನಿಕಾ ಮತ್ತು ಮೋನಿಕಾ ಅವರ ಸ್ಥಿತಿ ಗಂಭೀರವಾಗಿದೆ.
ಎರಡೂವರೆ ಎಕರೆ ಭೂಮಿ ಹೊಂದಿರುವ ಸುಬ್ರಹ್ಮಣ್ಯ ಒಂದು ಎಕೆರೆಯಲಿ ಶುಂಠಿ, ಉಳಿದ ಭೂಮಿಯಲ್ಲಿ ಹೊಗೆಸೊಪ್ಪು ಬೆಳೆದಿದ್ದರು. ಕೃಷಿ ಕಾರ್ಯಕ್ಕಾಗಿ ಪಟ್ಟಣದ ಕರ್ಣಾಟಕ ಬ್ಯಾಂಕಿನಲ್ಲಿ ₹ 4 ಲಕ್ಷ ಹಾಗೂ ಖಾಸಗಿ ವ್ಯಕ್ತಿಗಳಿಂದ ₹ 5 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಮಳೆ ಅಭಾವದಿಂದಾಗಿ ಯಾವ ಬೆಳೆಯೂ ಕೈಗೂಡಲಿಲ್ಲ.
ಇದರಿಂದ ಬೇಸತ್ತ ರೈತ ಮಂಗಳವಾರ ಬೆಳಿಗ್ಗೆ 10.30ಕ್ಕೆ ಇಬ್ಬರು ಮಕ್ಕಳಿಗೆ ಒಂದೊಂದು ಕ್ರಿಮಿನಾಶಕ ಮಾತ್ರೆ ಕೊಟ್ಟು ತಾವೂ ಎರಡು ಮಾತ್ರೆ ನುಂಗಿದ್ದಾರೆ. ವಿಷಯ ತಿಳಿದ ಮನೆಯವರು ಕೂಡಲೇ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿಗೆ ಸಾಗಿಸಿದ್ದಾರೆ.
ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.