ADVERTISEMENT

‘ಸಾಹಿತಿಗೆ ಸಾಮಾಜಿಕ ಹೊಣೆಗಾರಿಕೆ ಅಗತ್ಯ’

ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 84ನೇ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2016, 20:11 IST
Last Updated 28 ನವೆಂಬರ್ 2016, 20:11 IST
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ಸೋಮವಾರ ನಡೆದ ಸಾಹಿತ್ಯ ಸಮ್ಮೇಳನದ 84ನೇ ಅಧಿವೇಶನವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಉದ್ಘಾಟಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಎಂ. ಎನ್. ವ್ಯಾಸರಾವ್, ಬೆಂಗಳೂರಿನ ವಸುಧೇಂದ್ರ, ಸುಳ್ಯದ ಡಾ. ವೀಣಾ ಮತ್ತು ಬೆಂಗಳೂರಿನ ಹರಿಪ್ರಕಾಶ್ ಕೋಣೆಮನೆ ಉಪಸ್ಥಿತರಿದ್ದರು.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ಸೋಮವಾರ ನಡೆದ ಸಾಹಿತ್ಯ ಸಮ್ಮೇಳನದ 84ನೇ ಅಧಿವೇಶನವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಉದ್ಘಾಟಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಎಂ. ಎನ್. ವ್ಯಾಸರಾವ್, ಬೆಂಗಳೂರಿನ ವಸುಧೇಂದ್ರ, ಸುಳ್ಯದ ಡಾ. ವೀಣಾ ಮತ್ತು ಬೆಂಗಳೂರಿನ ಹರಿಪ್ರಕಾಶ್ ಕೋಣೆಮನೆ ಉಪಸ್ಥಿತರಿದ್ದರು.   

ಉಜಿರೆ: ‘ಬದುಕು ಮತ್ತು ಬರಹದಲ್ಲಿ ವ್ಯತ್ಯಾಸ ಇರಬಾರದು. ಸಾಹಿತಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಸಮಾಜ ಸುಧಾರಣೆಯ ಜವಾಬ್ದಾರಿ ಆತನಿಗೆ ಇದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸೋಮವಾರ ನಡೆದ ಸಾಹಿತ್ಯ ಸಮ್ಮೇಳನದ 84ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನತೆ ಸಾಹಿತ್ಯದ ಬಗ್ಗೆ ಒಲವು, ಅಭಿಮಾನ ಮತ್ತು ಆಸಕ್ತಿ ಹೊಂದಿರಬೇಕು. ಸರ್ವರ ಹಿತವೇ ಸಾಹಿತ್ಯದ ಉದ್ದೇಶ. ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಬದುಕನ್ನು ಹಸನುಗೊಳಿಸಿ ಸುಖಮಯವನ್ನಾಗಿ ಮಾಡುವ ಬಗ್ಗೆ ಚಿಂತನೆ - ಮಂಥನ ನಡೆಸಬೇಕು. ಜಾನಪದ ಕಲೆಗಳು ಮತ್ತು ಸಂಸ್ಕೃತಿ ಇಂದು ವಿನಾಶದಂಚಿನಲ್ಲಿದ್ದು ಅವುಗಳ ಸಂರಕ್ಷಣೆಯಾಗಬೇಕು. ಮುಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದ ಅವರು, ‘ಈ ದಿಸೆಯಲ್ಲಿ ಸರ್ಕಾರ ಅಕಾಡೆಮಿಗಳು ಮತ್ತು ಮಠ - ಮಂದಿರಗಳು ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಹೇಳಿದರು.

‘ಸಾಹಿತ್ಯವು ಮನಸ್ಸುಗಳನ್ನು ಒಡೆಯುವ ಕೆಲಸ ಮಾಡದೆ ಅವುಗಳನ್ನು ಬೆಸೆಯುವ ಕಾರ್ಯ ಮಾಡಬೇಕು. ಧರ್ಮಸ್ಥಳವು ಕೇವಲ ಸರ್ವಧರ್ಮ ಸಮನ್ವಯ ಕೇಂದ್ರವಲ್ಲ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಮ್ಮಿಲನದ ಕೇಂದ್ರವೂ ಆಗಿದ್ದು, ಸಮಾಜಕ್ಕೆ ಸ್ಫೂರ್ತಿಯ ಚಿಲುಮೆ ಆಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿ. ವೀರೇಂದ್ರ ಹೆಗ್ಗಡೆ ಅವರು, ‘ವ್ಯಕ್ತಿಗೆ ಹಾಗೂ ಸಮಾಜಕ್ಕೆ ಹಿತವನ್ನುಂಟು ಮಾಡುವ ಸಾಹಿತ್ಯಕ್ಕೆ ಸಾರ್ವತ್ರಿಕವಾದ ಬೆಂಬಲ ಅಗತ್ಯ. ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಾತೃ ಭಾಷೆಯಾದ ಕನ್ನಡ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಮನೆಯಲ್ಲಿಯೂ, ಸಾಮಾಜಿಕ ಸಂಘಟನೆಗಳಲ್ಲಿಯೂ, ಶಾಲಾ-ಕಾಲೇಜುಗಳಲ್ಲಿಯೂ ಕನ್ನಡದ ಬಗ್ಗೆ ಪ್ರೇಮ ಮತ್ತು ಅಭಿಮಾನ ಬೆಳೆಯಬೇಕು. ಉತ್ತಮ ಸಾಹಿತ್ಯವನ್ನು ರಚಿಸುವ ಲೇಖಕರನ್ನು, ಪ್ರಕಾಶಕರನ್ನು ಹಾಗೂ ಓದುಗರನ್ನು ಬೆಂಬಲಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಸಾಹಿತಿ ಎಂ. ಎನ್. ವ್ಯಾಸರಾವ್ ಮಾತನಾಡಿ, ‘ಇಂದು ಜನಪ್ರಿಯತೆಗಾಗಿ ಮತ್ತು ಅಗ್ಗದ ಪ್ರಚಾರಕ್ಕಾಗಿ ಬರೆಯುವವರೇ ಹೆಚ್ಚಾಗಿದ್ದಾರೆ. ಸಾಹಿತ್ಯದಲ್ಲಿ ಮೌಲ್ಯಗಳು ಮಾಯವಾಗುತ್ತಿವೆ. ಕಾವ್ಯ, ಕಾದಂಬರಿ, ನಾಟಕಗಳಲ್ಲಿ ಮಾನವೀಯ ಮೌಲ್ಯಗಳು ಕಾಣುತ್ತಿಲ್ಲ. ಅಕ್ಷರಗಳ ಜೋಡಣೆಯೊಂದಿಗೆ ಅನುಭವವನ್ನು ಲಿಖಿತ ರೂಪದಲ್ಲಿ ಸಾದರಪಡಿಸುವುದೇ ಸಾಹಿತ್ಯವಾಗಿದೆ. ಸಾಹಿತ್ಯ ರಚನೆಯಲ್ಲಿ ಲೋಕಾನುಭವ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.

ಬೆಂಗಳೂರಿನ ವಸುಧೇಂದ್ರ, ಸುಳ್ಯದ ಡಾ. ವೀಣಾ ಮತ್ತು ಬೆಂಗಳೂರಿನ ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿದರು.

1 ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ 
ಬೆಂಗಳೂರಿನಿಂದ 20 ತಂಡಗಳಲ್ಲಿ ಬಂದ ಭಕ್ತರು ಸೋಮವಾರ ರಾತ್ರಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ ಮಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದ 2,345 ಮಂದಿ ಕಲಾವಿದರು ಇಡೀ ರಾತ್ರಿ ಕಲಾ ಸೇವೆ ಮಾಡಿದರು. ಶಂಖ, ಕೊಂಬು, ಕಹಳೆ, ಬ್ಯಾಂಡ್, ವಾಲಗ, ವೀರಗಾಸೆ, ಚೆಂಡೆ ಇತ್ಯಾದಿ ಕಲಾವಿದರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.