ಇಸ್ಲಾಮಾಬಾದ್(ಪಿಟಿಐ): ಮುಂಬೈ ದಾಳಿಯ ಪ್ರಮುಖ ಸಂಚುಕೋರ ಝಕೀವುರ್ ರೆಹಮಾನ್ ಲಖ್ವಿಗೆ ‘ಗಂಭೀರ ಜೀವ ಬೆದರಿಕೆ’ ಇರುವ ಕಾರಣ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಬುಧವಾರ ನೇರ ಹಾಜರಾತಿಗೆ ವಿನಾಯಿತಿ ನೀಡಿದೆ.
‘ವಿಚಾರಣೆ ನಡೆಸಿದ ಭಯೋತ್ಪಾ ದನಾ ನಿಗ್ರಹ ನ್ಯಾಯಾಲಯವು ಲಖ್ವಿಗೆ ಭದ್ರತೆಯ ಆಧಾರದಲ್ಲಿ ನೇರ ಹಾಜರಾತಿಗೆ ವಿನಾಯಿತಿ ನೀಡಿದೆ’ ಎಂದು ಸುದ್ದಿಗಾರರಿಗೆ ಲಖ್ವಿ ಪರ ವಕೀಲ ರಜಾ ರಿಜ್ವಾನ್ ಅಬ್ಬಾಸಿ ತಿಳಿಸಿದ್ದಾರೆ. ‘ಇಸ್ಲಾಮಾಬಾದ್ ಪೊಲೀಸ್ ಮಹಾ
ನಿರೀಕ್ಷಕರು ‘ಲಖ್ವಿಗೆ ಗಂಭೀರ ಜೀವ ಬೆದರಿಕೆ’ಯ ಬಗ್ಗೆ ವರದಿ ನೀಡಿದ ನಂತರ ಲಖ್ವಿಯ ಅರ್ಜಿಯನ್ನು ಅಂಗೀಕರಿಸಿದೆ’ ಎಂದು ಅಬ್ಬಾಸಿ ತಿಳಿಸಿದರು.
ವಿದೇಶಿ ಗುಪ್ತಚರ ಸಂಸ್ಥೆ ಮತ್ತು ತಾಲಿಬಾನ್ನಿಂದ ಜೀವ ಬೆದರಿಕೆ ಇದೆ. ಹಾಗಾಗಿ ನ್ಯಾಯಾಲಯದಲ್ಲಿ ನೇರ ಹಾಜರಾತಿಗೆ ವಿನಾಯಿತಿ ಕೋರಿ ಲಖ್ವಿ ಅರ್ಜಿ ಸಲ್ಲಿಸಿದ್ದ. ‘ಲಖ್ವಿ ನ್ಯಾಯಾಲಯಕ್ಕೆ ಬರುವಾಗ ಅಥವಾ ನ್ಯಾಯಾಲಯದಿಂದ ಹಿಂದಿರುಗುವಾಗ ಹತ್ಯೆಯಾಗುವ ಸಾಧ್ಯತೆ ಇದೆ’ ಎಂದು ಅಬ್ಬಾಸಿ ಆತಂಕ ವ್ಯಕ್ತಪಡಿಸಿದ್ದರು.
ಮುಂಬೈ ಸ್ಫೋಟದ ತನಿಖೆ 2009 ರಲ್ಲಿ ಆರಂಭವಾಗಿದೆ. ಬಂಧನದಲ್ಲಿದ್ದ ಲಖ್ವಿ ಮತ್ತು ಇತರ 6 ಶಂಕಿತರು ಅಡಿಯಾಲಾ ಜೈಲಿನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗುತ್ತಿದ್ದರು. ಆದರೆ ಏಪ್ರಿಲ್ನಲ್ಲಿ ಲಖ್ವಿ ಬಿಡುಗಡೆಯಾಗಿದೆ. ಹಾಗಾಗಿ ಈಗ ಆತ ಹೊರಗಡೆ ವಿಚಾರಣೆಗೆ ಹಾಜರಾಗಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.