ಲಾಹೋರ್: 2008ರ ಮುಂಬೈ ದಾಳಿ ರೂವಾರಿ, ಜಮಾತ್ ಉದ್ ದವಾದ (ಜೆಯುಡಿ) ನಾಯಕ ಹಫೀಸ್ ಸಯೀದ್ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಂಗ ಪರಿಶೀಲನಾ ಮಂಡಳಿ ಬುಧವಾರ ಆದೇಶಿಸಿದೆ.
ಕಳೆದ ತಿಂಗಳು ಮಂಡಳಿಯು 30ದಿನಗಳ ಮಟ್ಟಿಗೆ ಬಂಧನವನ್ನು ವಿಸ್ತರಣೆ ಮಾಡಿತ್ತು. ಈ ಅವಧಿ ಮುಂದಿನ ವಾರ ಮುಗಿಯಲಿದೆ. ಈ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಣೆ ಮಾಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ‘ಹಫೀಸ್ ಬೇರೆ ಪ್ರಕರಣಗಳಲ್ಲಿ ಬೇಕಿಲ್ಲದ ಪಕ್ಷದಲ್ಲಿ ಆತನನ್ನು ಬಿಡುಗಡೆ ಮಾಡಿ’ ಎಂದು ಲಾಹೋರ್ ಹೈಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ಸಮಿ ಖಾನ್ ನೇತೃತ್ವದ ಮಂಡಳಿ ನಿರ್ದೇಶಿಸಿದೆ.
ಹಫೀಸ್ ಹಾಗೂ ಲಷ್ಕರ್– ಎ– ತಯಬಾ ಕಮಾಂಡರ್ ಝಕಿ–ಉರ್ ರೆಹಮಾನ್ ಲಖ್ವಿ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಭಾರತ ಈಗಾಗಲೇ ಇಸ್ಲಾಮಾಬಾದ್ಗೆ ನೀಡಿದೆ. ಅದರ ಆಧಾರದ ಮೇಲೆ 166 ಮಂದಿಯ ಸಾವಿಗೆ ಕಾರಣವಾದ ಮುಂಬೈ ದಾಳಿಯ ಮರು ತನಿಖೆಯನ್ನು ನಡೆಸುವಂತೆ ಭಾರತ ಮೇಲಿಂದ ಮೇಲೆ ಪಾಕಿಸ್ತಾನವನ್ನು ಕೋರುತ್ತಾ ಬಂದಿದೆ. ಆದರೆ ಈ ನಡುವೆಯೇ, ನ್ಯಾಯಾಂಗ ಪರಿಶೀಲನಾ ಮಂಡಳಿ ಇಂಥದ್ದೊಂದು ಆದೇಶ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.