ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಎದುರುಗೊಳ್ಳುತ್ತವೆ. ಹಬ್ಬದ ಸಂಭ್ರಮಕ್ಕೆ ಮನೆಯ ಮೂಲೆ ಮೂಲೆ ಮತ್ತು ಸಜ್ಜಾಗಳಲ್ಲಿನ ದೂಳು, ತ್ಯಾಜ್ಯಗಳನ್ನು ತೆಗೆದು ಸಜ್ಜುಗೊಳಿಸುವುದು ಮುಖ್ಯ. ಕೆಲಸದ ಒತ್ತಡವಿದ್ದರೂ ಮನೆಯನ್ನು ಒಪ್ಪ ಓರಣವಾಗಿ ಇಟ್ರೆ ಮಾತ್ರ ಹಬ್ಬಕ್ಕೊಂದು ಕಳೆ.
ಅನಾವಶ್ಯಕ ವಸ್ತುಗಳಿಗೆ ಮುಕ್ತಿ ನೀಡಿ: ನೀವು ಧರಿಸದ ಆದರೆ ಚೆನ್ನಾಗಿರುವ ಬಟ್ಟೆಗಳನ್ನು ಬಡವರಿಗೆ ದಾನ ಕೊಡಿ. ಇದರಿಂದ ಹಬ್ಬದ ಪ್ರಾರಂಭಕ್ಕೆ ಒಳ್ಳೆಯ ಕೆಲಸ ಮಾಡಿದ ಜೊತೆಗೆ ಮನೆಯೂ ಶುಚಿಯಾಗುತ್ತದೆ. ಅಡುಗೆ ಮನೆಯ ಕಪಾಟಿನಲ್ಲಿರುವ ಹಳೆಯ ಡಬ್ಬಿಗಳನ್ನು, ಕೆಲಸಕ್ಕೆ ಬಾರದ ವಸ್ತುಗಳನ್ನು ಬಿಸಾಕಿ.
ಬಳಕೆಯ ಡಬ್ಬಿಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ಬಚ್ಚಲಿನಲ್ಲಿರುವ ಹಳೆಯ ಶ್ಯಾಂಪು ಡಬ್ಬಿ, ಇತರ ಅನುಪಯುಕ್ತ ವಸ್ತುಗಳನ್ನು ಹೊರಗೆ ಹಾಕಿ. ಕ್ಲೀನರ್ಗಳಿಂದ ಶೌಚಾಲಯವನ್ನು ತೊಳೆದು ಹೊಸತರಂತೆ ಮಾಡಿ.
ಸಿದ್ಧತೆ ಮಾಡಿಕೊಳ್ಳಿ: ಕರ್ಟನ್, ಅಲಂಕಾರಿಕ ವಸ್ತುಗಳನ್ನೆಲ್ಲ ತೊಳೆದು, ಒರೆಸಿ ಶುಚಿಮಾಡಿ. ಒಂದು ವೇಳೆ ಅವೆಲ್ಲ ಹಳತಾಗಿದ್ದರೆ ಹೊಸದನ್ನು ಕೊಂಡುಕೊಳ್ಳಿ. ಕಡೆಯ ಗಳಿಗೆಯಲ್ಲಿ ಒದ್ದಾಡುವುದಕ್ಕಿಂತ ಹಬ್ಬಕ್ಕೆ ಒಂದೋ ಎರಡೋ ವಾರ ಇರುವಾಗಲೇ ಸ್ವಚ್ಛತೆಯ ಕಾರ್ಯ ಶುರು ಮಾಡುವುದು ಸೂಕ್ತ.
ಬಾಲ್ಕನಿಯನ್ನು ಶುಚಿಮಾಡಿ: ಹಳ್ಳಿ ಮನೆಗಳಲ್ಲಿ ಸೆಗಣಿಯಿಂದ ಮನೆಯ ಅಂಗಳವನ್ನು ಸಾರಿಸಿ ಹಬ್ಬವನ್ನು ಸ್ವಾಗತಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಅಂಗಳ ಇರುವುದೇ ಕಷ್ಟ. ಮನೆಯ ಮುಂದಿರುವ ಸ್ವಲ್ಪ ಜಾಗವನ್ನು ಶುಚಿಯಾಗಿಸಿ ಚೆಂದದ ರಂಗೋಲಿಯ ಚಿತ್ತಾರ ಮೂಡಿಸಿ.
ಬಣ್ಣ ಹಚ್ಚಲು ಸಕಾಲ: ಹಬ್ಬಗಳಿಗೂ ಮೊದಲು ಮನೆಗೆ ಹೊಸ ಮೆರುಗು ನೀಡುವುದು ಸಾಮಾನ್ಯ. ಮನೆಗೆ ಹಚ್ಚಿರುವ ಪೇಂಟ್ ಹಳತಾಗಿದ್ದರೆ, ಹೊಸ ಬಣ್ಣ ಹಚ್ಚಿ. ಧನಾತ್ಮಕ ಅಂಶಗಳನ್ನು ಸ್ವಾಗತಿಸುವ ಕಾಲಕ್ಕೆ ಶುಭ್ರ ಮತ್ತು ಕಣ್ಮನಕ್ಕೆ ತಂಪೆನಿಸುವ ಬಣ್ಣಗಳನ್ನೇ ಆಯ್ಕೆ ಮಾಡುವುದು ಒಳ್ಳೆಯದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.