ದುಷ್ಟಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟರೆ ಮುಂದೊಂದು ದಿನ ಅದು ತನಗೇ ತಿರುಗುಬಾಣವಾಗಬಹುದು ಎನ್ನುವ ಮಾತು ಪಾಕಿಸ್ತಾನದ ವಿಷಯದಲ್ಲಿ ನಿಜವಾಗುತ್ತಿರುವುದು ದುರದೃಷ್ಟಕರ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಉದ್ದೀಪಿಸಲು ತನ್ನ ನೆಲದಲ್ಲೇ ಉಗ್ರರಿಗೆ ಆಶ್ರಯತಾಣ ಒದಗಿಸಿರುವ ಆ ದೇಶ ಆಗಾಗ್ಗೆ ಅದಕ್ಕೆ ಬೆಲೆ ತೆರುತ್ತಿದೆ; ಆತ್ಮಹತ್ಯಾ ದಾಳಿಗಳಿಗೆ ತುತ್ತಾಗುತ್ತಲೇ ಇದೆ.
ವಾಘಾ ಗಡಿಯಲ್ಲಿ ಭಾನುವಾರ ನಡೆದಿರುವ ಬಾಂಬ್ ಸ್ಫೋಟ ಇದಕ್ಕೆ ಉದಾಹರಣೆ. ಪ್ರತಿ ಸಂಜೆ ಧ್ವಜ ಅವರೋಹಣದ ವೇಳೆ ಉಭಯ ದೇಶಗಳ ಸೈನಿಕರು ನಡೆಸುವ ಅಣಕು ಆಕ್ರಮಣವನ್ನು ಒಳಗೊಂಡ ಆಕರ್ಷಕ ಕವಾಯತು ವೀಕ್ಷಣೆಗೆ ಎರಡೂ ಗಡಿಗಳಲ್ಲಿ ಸಾಕಷ್ಟು ಜನ ನೆರೆಯುತ್ತಾರೆ. ಮಹಾತ್ಮ ಗಾಂಧೀಜಿ ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರಗಳ ಸಮ್ಮುಖದಲ್ಲಿ ನಡೆಯುವ ಈ ಮನಮೋಹಕ ಕವಾಯತನ್ನು ಕಣ್ತುಂಬಿಕೊಳ್ಳಲು ಭಾನುವಾರವಂತೂ ಸಾವಿರಾರು ಜನ ಸೇರುತ್ತಾರೆ. ಅಂತಹ ರಜಾದಿನವನ್ನೇ ಆಯ್ದುಕೊಂಡಿರುವ ಉಗ್ರರು, ಭದ್ರತಾ ಪಡೆಗಳಿಗಿಂತಲೂ ತಾವು ಚಾಣಾಕ್ಷರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಗಡಿಯಲ್ಲಿ ದಾಳಿ ನಡೆಯುವ ಮುನ್ಸೂಚನೆ ಸಿಕ್ಕಿತ್ತು, ಹೀಗಾಗಿ ನಾವು ಎಚ್ಚರಿಕೆ ವಹಿಸಿದ್ದೆವು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಹಾಗಿದ್ದರೆ ಪಾಕಿಸ್ತಾನಕ್ಕೆ ಅಂತಹದ್ದೊಂದು ಮುನ್ಸೂಚನೆ ಸಿಕ್ಕಿರಲಿಲ್ಲವೇ? ಕುಖ್ಯಾತ ಉಗ್ರ ಒಸಾಮ ಬಿನ್ ಲಾಡೆನ್ ಅಂತಹವನಿಗೇ ಆಶ್ರಯ ಕೊಟ್ಟಿದ್ದ ದೇಶ ಅದು. ಅಲ್ಲಿನ ಸರ್ಕಾರ ಮತ್ತು ಸೇನೆಯ ಆಯಕಟ್ಟಿನ ಜಾಗಗಳಲ್ಲಿ ಇದ್ದುಕೊಂಡು ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವವರು ಬೇಕೆಂದೇ ಅಂತಹ ಮುನ್ಸೂಚನೆ ಕಡೆಗಣಿಸಿರಬಹುದಾದ ಸಾಧ್ಯತೆ ಇದೆ. ಹೀಗಾಗಿ ಈ ಭದ್ರತಾ ಲೋಪವನ್ನು ಪಾಕ್ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಮುಂಬೈ ದಾಳಿ ಪ್ರಕರಣದಲ್ಲಿ ಭಾರತ ಒದಗಿಸಿದ ಸಾಕ್ಷ್ಯಕ್ಕೆ ಬೆಲೆ ಕೊಟ್ಟು ಉಗ್ರ ಸಂಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರೆ ಅವುಗಳಿಗೆ ತಕ್ಕ ಸಂದೇಶ ರವಾನಿಸಿದಂತೆ ಆಗುತ್ತಿತ್ತು. ಅದು ಬಿಟ್ಟು ನಮ್ಮ ಸಾಕ್ಷ್ಯಗಳನ್ನೇ ಶಂಕೆಯಿಂದ ನೋಡಿದ ಪಾಕಿಸ್ತಾನ ಸರ್ಕಾರದ ನಿಲುವು ಪರೋಕ್ಷವಾಗಿ ಉಗ್ರರ ಬೆನ್ನುತಟ್ಟಿದಂತೆಯೇ ಇತ್ತು. ಹೀಗಾಗಿ ಈಗ ವಾಘಾ ಘಟನೆಯ ನೈತಿಕ ಹೊಣೆ ಹೊರಲು ಮೂರು ಉಗ್ರ ಸಂಘಟನೆಗಳು ಪೈಪೋಟಿ ನಡೆಸುವಂತಹ ಮಟ್ಟಕ್ಕೆ ಅಲ್ಲಿನ ಭಯೋತ್ಪಾದನೆ ಬಂದು ನಿಂತಿದೆ. ದೇಶ, ಧರ್ಮಗಳ ಹಂಗಿಲ್ಲದ ಭಯೋತ್ಪಾದನೆಯು ಮಾನವೀಯತೆಗೆ ಮಾರಕ. ತನ್ನ ಗಡಿಯಿಂದ ಕೆಲವೇ ಮೀಟರ್ ದೂರದಲ್ಲಿ ಈ ಘಟನೆ ನಡೆದಿರುವುದರಿಂದ ಭಾರತ ಸಹ ಕಟ್ಟೆಚ್ಚರ ವಹಿಸಲೇಬೇಕಾಗಿದೆ. ಅತಿಯಾದ ಆತ್ಮವಿಶ್ವಾಸದಿಂದ ಕೊಂಚ ಮೈಮರೆತರೂ ರಾತ್ರಿ ಕಂಡ ಬಾವಿಗೆ ಹಗಲು ಬೀಳಬೇಕಾಗುತ್ತದೆ ಅಷ್ಟೆ.
ಪಾಕಿಸ್ತಾನಕ್ಕೆ ಪ್ರಜೆಗಳ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ವೃದ್ಧಿಸಿಕೊಳ್ಳುವ ಮನಸ್ಸಿದ್ದರೆ ಭಯೋತ್ಪಾದನೆ ಕುರಿತ ತನ್ನ ನಿಲುವನ್ನೇ ಪಾಕ್ ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ವಿಶ್ವ ಸಮುದಾಯಕ್ಕೂ ಇದು ಎಚ್ಚರಿಕೆಯ ಗಂಟೆ. ಇಂತಹ ಕೃತ್ಯಗಳನ್ನು ಅಂತರರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು. ಭಯೋತ್ಪಾದನೆಯ ಬೇರುಗಳನ್ನು ಮೂಲೋತ್ಪಾಟನೆ ಮಾಡಲು ದೃಢ ನಿಲುವು ತಳೆಯಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.