ರೈತ ಮಹಿಳೆ ಜಯಮ್ಮ ಅವರು, ಬರದಿಂದಾಗಿ ನಿರ್ವಹಣೆ ಮಾಡಲಾಗದೆ ತಮ್ಮ ತೋಟದಲ್ಲಿನ ಅಡಿಕೆ ಮರಗಳನ್ನೆಲ್ಲ ಕತ್ತರಿಸಿ ಮನೆಯವರ ಜೊತೆ ಸೇರಿ ಬೆಂಕಿ ಹಾಕಿ ಸುಟ್ಟಿರುವುದು, ರಾಜ್ಯದಲ್ಲಿ ತಲೆದೋರಿರುವ ಬರದ ಭೀಕರತೆಗೆ ಸಾಕ್ಷಿಯಾಗಿದೆ.
ರೈತರ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿರುವುದರ ದ್ಯೋತಕ ಸಹ ಇದಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬಂದು ಅವರಿಗೆ ಧೈರ್ಯ ತುಂಬಬೇಕು ಮತ್ತು ಆತ್ಮಹತ್ಯೆಯಂತಹ ಹೇಯ ಕೃತ್ಯಕ್ಕೆ ಒಳಗಾಗುವುದನ್ನು ತಡೆಯಬೇಕು.
ರೈತರು ಸಹ ತಮ್ಮ ಸಾಂಪ್ರದಾಯಿಕ ಕೃಷಿಗೆ ತಿಲಾಂಜಲಿ ನೀಡಿ, ಬದಲಾದ ಪರಿಸ್ಥಿತಿ, ಹವಾಮಾನ, ಮಣ್ಣಿನ ಗುಣಕ್ಕೆ ಅನುಗುಣವಾಗಿ ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ನೀಡುವ ಬೆಳೆಗಳನ್ನು ಬೆಳೆಯುವುದು ಒಳಿತು. ಕೃಷಿ ವಿಜ್ಞಾನಿಗಳು ತಮ್ಮ ಹವಾನಿಯಂತ್ರಿತ ಕೊಠಡಿಗಳಿಂದ ಹೊರಬಂದು ರೈತರೊಂದಿಗೆ ಸಮಾಲೋಚಿಸಿ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಬೆಳೆಯಲು ಅವರನ್ನು ಪ್ರೋತ್ಸಾಹಿಸಬೇಕು.
ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸರ್ಕಾರ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರೈತರ ಬದುಕು ಹಸನಾದೀತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.