ADVERTISEMENT

ಗುರುವಾರ, 20–4–1967

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST

ಮಂಗಳೂರು–ಹಾಸನ ರೈಲ್ವೆ ಮಾರ್ಗ 1971ರ ವೇಳೆಗೆ ಸಿದ್ಧ– ಪೂಣಚ್ಚ
ಮಂಗಳೂರು, ಏ. 19–  ಮಂಗಳೂರು–ಹಾಸನ ರೈಲ್ವೆ ಮಾರ್ಗ ನಿರ್‍ಮಾಣವು 1971ರ ಹೊತ್ತಿಗೆ ಮುಗಿಯುವುದೆಂದು ರೈಲ್ವೆ ಮಂತ್ರಿ ಶ್ರೀ ಸಿ.ಎಂ. ಪೂಣಚ್ಚ ಅವರು ಹೇಳಿದರು.

ಮಂಗಳೂರು ಬಂದರು ಯೋಜನೆ ಹಾಗೂ ಈ ರೈಲ್ವೆ ಹಾದಿ ನಿರ್‍ಮಾಣವು ಏಕ ಕಾಲದಲ್ಲಿಯೇ ಮುಗಿಯುವುದು.

ತಮ್ಮ ಪಾರ್ಲಿಮೆಂಟರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುವುದಕ್ಕಾಗಿ ಹೊರಡುವ ಮುನ್ನ ಪತ್ರಕರ್ತರೊಡನೆ ಮಾತನಾಡುತ್ತಾ ಶ್ರೀ ಪೂಣಚ್ಚ ಅವರು ‘ಘಾಟ್‌ ವಿಭಾಗದ ಪ್ರದೇಶದಲ್ಲಿ ರೈಲ್ವೆ ಹಾದಿ ನಿರ್‍ಮಾಣಕ್ಕೆ ಅಡ್ಡಿಯುಂಟಾಗಿದೆ. ಅಲ್ಲಿ 38 ಸುರಂಗಗಳನ್ನು ತೋಡಬೇಕಾಗಿದೆ. ಐದು ಸುರಂಗ ಹಾದಿಗಳು ನಿರ್‍ಮಾಣವಾಗುತ್ತಿದೆ’ ಎಂದರು.

ADVERTISEMENT

ಪಾಮಡಿ ಸುಬ್ಬರಾಮ ಶೆಟ್ಟಿ ಅವರ ನಿಧನ
ಬೆಂಗಳೂರು, ಏ. 19–
ಮಾಜಿ ಸಚಿವ ‘ರಾಜ ಸೇವಾಸಕ್ತ’ ಪಾಮಡಿ ಸುಬ್ಬರಾಮ ಶೆಟ್ಟಿ ಅವರು ತಮ್ಮ 84ನೇ ವಯಸ್ಸಿನಲ್ಲಿ ಗಾಂಧಿನಗರದಲ್ಲಿರುವ ಸ್ವಗೃಹದಲ್ಲಿ ಇಂದು ಸಂಜೆ 6–40ಕ್ಕೆ ನಿಧನರಾದರು.

ದಿವಂಗತರಿಗೆ ಇಬ್ಬರು ಸಹೋದರರು, ಒಬ್ಬರು ಸೋದರಿ ಮತ್ತು ಒಬ್ಬರು ಪುತ್ರರಿದ್ದಾರೆ. ಅವರ ಅಂತಿಮ ಕ್ರಿಯೆಯು ನಾಳೆ ಚಾಮರಾಜಪೇಟೆ ಸ್ಮಶಾನದಲ್ಲಿ ನೆರವೇರುವುದು.

1883ರ ಮಾರ್ಚ್‌ 15 ರಂದು ದಿವಂಗತರ ಜನನ. ಮೂವತ್ತು ವರ್ಷಗಳ ಕಾಲ ಬೆಂಗಳೂರು ಪುರಸಭೆಯ ಸದಸ್ಯರೂ ಮೂರು ಸಲ ಅದರ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು. ಮೈಸೂರು ವಾಣಿಜ್ಯ ಸಂಘದ ಅಧ್ಯಕ್ಷರಾಗಿದ್ದರು.

ಠೇವಣಿಯಿಲ್ಲದಿರುವುದೇ ರಾಷ್ಟ್ರಪತಿ ಸ್ಥಾನಕ್ಕೆ ಹದಿನೇಳು ಜನರ ಸ್ಪರ್ಧೆಗೆ ಕಾರಣ
ನವದೆಹಲಿ, ಏ. 19–
ಚುನಾವಣಾ ಆಯೋಗದ ಎರಡು ಸಲಹೆಗಳನ್ನು ಜಾರಿಗೆ ತರುವುದರಲ್ಲಿ ಸರ್ಕಾರ ವಿಫಲವಾದುದೇ ರಾಷ್ಟ್ರಪತಿ ಸ್ಥಾನಕ್ಕೆ 17 ಜನ ಸ್ಪರ್ಧಿಸಲು ಕಾರಣ ಎನ್ನುವುದು ಇಲ್ಲಿಯ ರಾಜಕೀಯ ವಲಯಗಳ ಭಾವನೆ.

ಜನತಾ ಪ್ರಾತಿನಿಧ್ಯ ಶಾಸನದ 34 ಮತ್ತು 138ನೆಯ ವಿಧಿಗಳ ಪ್ರಕಾರ ಚುನಾವಣೆಗೆ ಸ್ಪರ್ಧಿಸುವರು ಠೇವಣಿ ಹಣವನ್ನು ನೀಡಬೇಕಾಗಿರುವಂತೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯಿದೆಯಲ್ಲಿ ಅಂತಹ ನಿಯಮ ವಿಲ್ಲದಿರುವುದಕ್ಕಾಗಿ ಚುನಾವಣಾ ಆಯೋಗ 1962ರ ತನ್ನ ವರದಿಯಲ್ಲಿ ಇದು ‘ಕುತೂಹಲಕಾರಿಯಾಗಿದೆ’ ಎಂದು ವರ್ಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.