ಕೇಂದ್ರ ಮತ್ತು ರಾಜ್ಯಗಳ ನಡುವೆ ಸೌಹಾರ್ದ, ನಂಬಿಕೆ ಅಗತ್ಯ
ನವದೆಹಲಿ, ಆ. 14– ಈ ಸಲದ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜಕೀಯ ತತ್ವಗಳನ್ನು ಪ್ರತಿಪಾದಿಸುವ ಸರ್ಕಾರಗಳು ಅಧಿಕಾರಕ್ಕೆ ಬಂದವು. ಇದು ಅಸಾಧಾರಣ ಬೆಳವಣಿಗೆ ಏನೂ ಅಲ್ಲ. ಇಂತಹ ಪರಿಸ್ಥಿತಿಯನ್ನು ನಿರೀಕ್ಷಿಸಿ, ಅದಕ್ಕೆ ತಕ್ಕಂತೆ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ. ಸಂವಿಧಾನ ಈಗ ಮೊಟ್ಟ ಮೊದಲ ಬಾರಿಗೆ ಪರೀಕ್ಷೆಗೆ ಒಳಗಾಗಿದೆ.
ಪ್ರಜೆಗಳ ಕಲ್ಯಾಣವೇ ಎಲ್ಲ ಸರ್ಕಾರಗಳ ಪ್ರಧಾನ ಲಕ್ಷಣ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆಯಾಗಲಿ, ರಾಜ್ಯ– ರಾಜ್ಯಗಳ ನಡುವೆಯಾಗಲಿ ಘರ್ಷಣೆ ಉಂಟಾಗಬೇಕಿಲ್ಲ ಎಂಬುದಾಗಿ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ರಾಷ್ಟ್ರವನ್ನುದ್ದೇಶಿಸಿ ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಮಾಡಿದ ಪ್ರಸಾರ ಭಾಷಣದಲ್ಲಿ ತಿಳಿಸಿದರು.
ಪಾಕಿಸ್ತಾನದ ಡೆಪ್ಯುಟಿ ಹೈಕಮಿಷನರ್ ಉಚ್ಚಾಟನೆಗೆ ಒತ್ತಾಯ
ನವದೆಹಲಿ, ಆ. 14–ಕಲ್ಕತ್ತದಲ್ಲಿರುವ ಪಾಕಿಸ್ತಾನದ ಡೆಪ್ಯುಟಿ ಹೈಕಮಿಷನರ್ ಅವರು ಕಳೆದ ತಿಂಗಳು ಪೂರ್ವಭಾವಿಯಾಗಿ ತಿಳಿಸದೆಯೇ ಪೂರ್ವ ಪಾಕಿಸ್ತಾನದ ಗಡಿಗೆ ಭೇಟಿ ಕೊಟ್ಟು ಮೂವರು ಮುಸಲ್ಮಾನರು ಭಾರತದಿಂದ ಪಾಕಿಸ್ತಾನಕ್ಕೆ ಪರಾರಿಯಾಗಲು ಸಹಾಯ ಮಾಡಿದ ಘಟನೆಯ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಆತಂಕವನ್ನು ವ್ಯಕ್ತಪಡಿಸಿದ ಸದಸ್ಯರು ಅವರನ್ನು ಅನಪೇಕ್ಷಿತ ವ್ಯಕ್ತಿಯೆಂದು ಘೋಷಿಸುವಂತೆ ಒತ್ತಾಯಪಡಿಸಿದರು.
ಇದು ತೀವ್ರವಾದ ಕ್ರಮ. ‘ಅಗತ್ಯವಾದರೆ ನಾವು ಅದನ್ನು ಮಾಡುತ್ತೇವೆ’ ಎಂದು ವಿದೇಶಾಂಗ ಸಚಿವ ಶ್ರೀ ಎಂ.ಸಿ. ಚಾಗಲಾ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.