ಹಲವು ತೆರಿಗೆಗಳಲ್ಲಿ ರಿಯಾಯಿತಿ ಘೋಷಿಸಿದ ವಿತ್ತ ಸಚಿವರು
ನವದೆಹಲಿ, ಜುಲೈ 24– ಕಳೆದ ಮೇ ತಿಂಗಳಲ್ಲಿ ತಾವು ಮಂಡಿಸಿದ್ದ ಬಜೆಟ್ನಲ್ಲಿ ಘೋಷಿಸಿದ್ದ ಹಲವು ತೆರಿಗೆ ಪ್ರಸ್ತಾವನೆಗಳಲ್ಲಿ ಕೆಲವಕ್ಕೆ ವಿತ್ತ ಸಚಿವ ಶ್ರೀ ಮೊರಾರ್ಜಿ ದೇಸಾಯಿ ಅವರು ಇಂದು ರಿಯಾಯಿತಿ ಘೋಷಿಸಿದ್ದಾರೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಆದಾಯದಲ್ಲಿ 15.36 ಕೋಟಿ ಕೊರತೆ ಆಗಲಿದೆ ಎಂದಿದ್ದಾರೆ.
ಸಗಟು ಮಾರಾಟದಲ್ಲಿ ಜೋಡಿಗೆ ಗರಿಷ್ಠ 5 ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಬೆಲೆಬಾಳುವ ಪಾದರಕ್ಷೆಗಳಿಗೆ ಅಬಕಾರಿ ಸುಂಕದಿಂದ ಸಂಪೂರ್ಣ ರಿಯಾಯಿತಿ ನೀಡಲಾಗಿದೆ. 5 ರಿಂದ 8 ರೂಪಾಯಿ ಬೆಲೆಬಾಳುವ ಪಾದರಕ್ಷೆಗಳ ಮೇಲೆ ತೆರಿಗೆ ಮುಂದುವರಿಯಲಿದ್ದು, ಈ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ದಾಟಿಸಬಾರದು ಎಂದು ಸಚಿವರು ಸೂಚಿಸಿದ್ದಾರೆ.
ಬಹುಮತ ಯಾಚನೆ: ಮಿಶ್ರಾಗೆ ಹೈಕಮಾಂಡ್ ಸೂಚನೆ
ನವದೆಹಲಿ, ಜುಲೈ 24– ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರಲ್ಲಿ ಅವಕಾಶ ಕೇಳುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಡಿ.ಪಿ. ಮಿಶ್ರಾ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.
ಅಧಿವೇಶನ ಕರೆಯದೆಯೇ ಸರ್ಕಾರವನ್ನು ಬರಖಾಸ್ತುಗೊಳಿಸುವಂತೆ ಹೈಕಮಾಂಡ್ ಮನವೊಲಿಸಲು ಮಿಶ್ರಾ ಶ್ರಮಿಸಿದ್ದರೂ ಅದು ಫಲ ನೀಡಲಿಲ್ಲ. ಈಗಾಗಲೇ 36 ಶಾಸಕರು ಕಾಂಗ್ರೆಸ್ ಬಿಟ್ಟು ವಿರೋಧ ಪಕ್ಷಗಳನ್ನು ಸೇರಿದ್ದು, ಅಧಿವೇಶನ ಕರೆದು ಮಹುಮತ ಯಾಚಿಸುವಷ್ಟರಲ್ಲಿ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅಧಿವೇಶನ ಇಲ್ಲದೆಯೇ ಸರ್ಕಾರವನ್ನು ಬರಖಾಸ್ತುಗೊಳಿಸಬೇಕು ಎಂಬುದು ಮಿಶ್ರಾ ಅವರ ಯೋಚನೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.