ಟಿಟೋ ಎಚ್ಚರಿಕೆ: ಅರಬ್ ವಿರುದ್ಧ ಇಸ್ರೇಲಿನ ದುರಾಕ್ರಮಣ ಸಾಹಸ ಸಲ್ಲದು
ಬೆಲ್ಗ್ರೇಡ್, ಅ. 13– ಅರಬ್ ಪ್ರದೇಶಗಳನ್ನು ಕಬಳಿಸುವ ಇಸ್ರೇಲ್ ಯತ್ನಗಳ ಮುಂದುವರಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಯುಗೋಸ್ಲಾವಿಯಾ ಅಧ್ಯಕ್ಷ ಮಾರ್ಷಲ್ ಟಿಟೋ ಅವರು ನಿನ್ನೆ ಇಲ್ಲಿ ಹೇಳಿದರು.
‘ಕಳೆದ ಜೂನ್ನಲ್ಲಿ ಈಜಿಪ್ಟ್ ಮೇಲೆ ಇಸ್ರೇಲ್ ನಡೆಸಿದ ದುರಾಕ್ರಮಣವು ತಾಟಸ್ಥ್ಯ ನೀತಿ ವಿರುದ್ಧ ನಡೆಸಿದ ದಾಳಿ’ ಎಂದು ಅವರು ಬಣ್ಣಿಸಿದರು.’
ಆರು ಲಕ್ಷಕ್ಕೂ ಹೆಚ್ಚು ಜನರಿಂದ ಜಂಬೂಸವಾರಿ ವೀಕ್ಷಣೆ
ಮೈಸೂರು, ಆ. 13– ಮೈಸೂರಿನ ಜಗತ್ಪ್ರಸಿದ್ಧ ದಸರಾ ಉತ್ಸವವನ್ನು ನೋಡಲು ಬಂದಿದ್ದ ದೇಶ–ವಿದೇಶಗಳ ಸುಮಾರು ಆರುಲಕ್ಷ ಜನ ಇಂದು ಅರ
ಮನೆಯಿಂದ ಬನ್ನೀಮಂಟಪದವರೆಗಿನ ಮೂರು ಮೈಲಿ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿ, ಪುತ್ರನೊಡನೆ ಆನೆಯಮೇಲೆ ಅಂಬಾರಿಯಲ್ಲಿ ಆಸನಾ ರೂಢರಾಗಿದ್ದ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರನ್ನು ಜಯಕಾರಗಳೊಡನೆ ಸ್ವಾಗತಿಸಿ, ಪ್ರೀತಿ, ಅಭಿಮಾನಗಳ ವೃಷ್ಟಿ ಕರೆದರು.
‘ಲೋಹಿಯಾ ಅಮರ ರಹೇ’ ಅಂತ್ಯ ಸಂಸ್ಕಾರ
ನವದೆಹಲಿ, ಅ. 13– ‘ಡಾ.ಲೋಹಿಯಾ ಜಿಂದಾಬಾದ್’ ಎಂದು ಸಹಸ್ರ ಸಹಸ್ರಜನ ಘೋಷಿಸುತ್ತಿದ್ದಂತೆ ಸೋಷಲಿಸ್ಟ್ ನಾಯಕರ ಪಾರ್ಥಿವ ಶರೀರವನ್ನು ಪವಿತ್ರ ಯಮುನಾ ನದಿಯ ದಡದಲ್ಲಿರುವ ವಿದ್ಯುತ್ ಚಿತೆಯ ಮೇಲೆ ಇರಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಗುರುದ್ವಾರ ರಾಕಬ್ಗಂಜ್ನಿಂದ ಯಮುನಾ ನದಿಯವರೆಗಿನ ಆರು ಮೈಲಿ ರಸ್ತೆಯ ಎರಡು ಕಡೆಗಳಲ್ಲೂ ಲಕ್ಷಾಂತರ ಜನ ನಿಂತು ಅಗಲಿದ ನಾಯಕನಿಗೆ ಅಂತಿಮ ಪ್ರಣಾಮವನ್ನು ಸಲ್ಲಿಸಿದರು.
ಅಂತಿಮ ಆಸೆ
ನವದೆಹಲಿ, ಅ. 13– ವಿದ್ಯುತ್ ಚಿತೆಯ ಮೇಲೆ ತಮ್ಮ ದಹನವಾಗಬೇಕೆಂಬುದು ಲೋಹಿಯಾರವರ ಈಡೇರಿದ ಆಸೆ.
ತಾವು ಸತ್ತರೆ ತಮ್ಮ ಅಂತ್ಯಕ್ರಿಯೆಗಳನ್ನು ವೇದೋಕ್ತ ರೀತಿಯಲ್ಲಿ ನಡೆಸಕೂಡದೆಂಬುದು ತಮ್ಮ ನಿಕಟವರ್ತಿಗಳಲ್ಲಿ ಕೆಲವರಿಗೆ ಡಾ. ಲೋಹಿಯಾ ನೀಡಿದ್ದ ಆದೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.