ಲೂನಾ–13ರ ಪ್ರಗತಿಯ ಬಗ್ಗೆ ರಷ್ಯದ ಮೌನ
ಮಾಸ್ಕೋ, ಡಿ. 23– ತಾನು ಚಂದ್ರಗ್ರಹದತ್ತ ಕಳುಹಿಸಿರುವ ಲೂನಾ–13 ರಾಕೆಟ್ನ ಉದ್ದೇಶದ ಬಗ್ಗೆ ರಷ್ಯವು ಮೌನ ತಾಳಿದೆ.
ಮೊನ್ನೆ ಹಾರಿಸಲಾದ ಆ ಉಪಗ್ರಹದ ಪ್ರಗತಿಯ ಬಗ್ಗೆ ನಿನ್ನೆ ವರದಿಗಳೇನೂ ಪ್ರಕಟವಾಗಲಿಲ್ಲ. ಆ ರಾಕೆಟ್
ಸುಗಮವಾಗಿ ಸಾಗಿದಲ್ಲಿ ಡಿಸೆಂಬರ್ 25ರ ಹೊತ್ತಿಗೆ ಚಂದ್ರಗ್ರಹದ ಸಮೀಪವನ್ನು ಮುಟ್ಟಲಿದೆ.
ಭಾರತದಲ್ಲಿ ವರ್ಷಕ್ಕೆ ಸುಮಾರು 1 ಕೋಟಿ ಗೋವುಗಳ ಹತ್ಯೆ
ನವದೆಹಲಿ, ಡಿ. 23– ಭಾರತದಲ್ಲಿ ವರ್ಷಕ್ಕೆ ಸುಮಾರು 1 ಕೋಟಿ ಗೋವುಗಳ ಹತ್ಯೆ ನಡೆಯುತ್ತಿದೆಯೆಂದೂ ಇದರಲ್ಲಿ ಬಹುಪಾಲು ಹತ್ಯೆ ಪಶ್ಚಿಮ ಬಂಗಾಳ ಹಾಗೂ ಮಾಹಾರಾಷ್ಟ್ರದಲ್ಲೆ ನಡೆಯುವುದೆಂದೂ ಸರ್ವಪಕ್ಷ ಗೋಹತ್ಯೆ ನಿರೋಧಕ ಕ್ರಿಯಾಸಮಿತಿ ಅಧ್ಯಕ್ಷ ಮುನಿ ಸುಶೀಲ್ ಕುಮಾರ್ರವರು ತಿಳಿಸಿದ್ದಾರೆ.
ಮೆನನ್ ರಾಜೀನಾಮೆ ಬಗ್ಗೆ ಇಂದಿರಾ ದುಃಖ
ಶಾಂತಿನಿಕೇತನ, ಡಿ. 23– ವಿದೇಶಗಳಲ್ಲಿ ಭಾರತದ ಕೀರ್ತಿ ಮೊಳಗಿಸಲು ಶ್ರೀ ಕೃಷ್ಣಮೆನನ್ ಅವರು ಸ್ತುತ್ಯ ಕಾರ್ಯ ನಿರ್ವಹಿಸಿದರಲ್ಲದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೊಂಟ ಕಟ್ಟಿ ದುಡಿದರೆಂದು ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.
ಅವರು ಪಕ್ಷಕ್ಕೆ ರಾಜೀನಾಮೆ ಕೊಟ್ಟ ಬಗ್ಗೆ ಪ್ರಧಾನಿ ತಮ್ಮ ದುಃಖ ವ್ಯಕ್ತಪಡಿಸಿದರು.
‘ಕಾಂಗ್ರೆಸ್ಸಿಗನಾಗಿ ರಚನಾತ್ಮಕ ಸೇವೆ ದುಸ್ಸಾಧ್ಯವಾದುದೇ ರಾಜೀನಾಮೆಗೆ ಕಾರಣ’
ಮುಂಬೈ, ಡಿ. 23– ಕಾಂಗ್ರೆಸ್ಸಿನಲ್ಲಿದ್ದು ರಚನಾತ್ಮಕ ಸೇವೆ ಮಾಡುವುದು ದುಸ್ಸಾಧ್ಯವಾದುದೇ ಪಕ್ಷ ತ್ಯಜಿಸುವುದಕ್ಕೆ ಮುಖ್ಯ ಕಾರಣವಾಯಿತೆಂದು
ಶ್ರೀ ವಿ.ಕೆ. ಕೃಷ್ಣಮೆನನ್ ಅವರು ತಿಳಿಸಿದರು.
ಕಾಂಗ್ರೆಸ್ನ ಮೂಲಭೂತ ಸಮಾಜವಾದಿ ಆದರ್ಶಗಳ ಬಗ್ಗೆ ತಮಗಾವ ಭಿನ್ನಾಭಿಪ್ರಾಯಗಳೂ ಇಲ್ಲವೆಂದು
ಹೇಳಿದ ಶ್ರೀಯುತರು ಪಕ್ಷದ ಉದ್ದೇಶಗಳನ್ನು ಕಾರ್ಯರೂಪದಲ್ಲಿ ತರುವುದರಲ್ಲಿ ಮಾತ್ರ ತಮ್ಮ ವಿರೋಧ ಇತ್ತೆಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.