ADVERTISEMENT

ಸೋಮವಾರ, 19–6–1967

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST

ಪೀಕಿಂಗ್‌ನಲ್ಲಿ ಭಾರತದ ರಾಯಭಾರಿ ಕಚೇರಿಯ ಮುತ್ತಿಗೆ ಇನ್ನೂ ನಿಂತಿಲ್ಲ
ಪೀಕಿಂಗ್, ಜೂ. 18– ಇಲ್ಲಿನ ಭಾರತದ ರಾಯಭಾರಿ ಕಚೇರಿಗೆ ರೆಡ್‌ಗಾರ್ಡ್‌ಗಳು ಹಾಕಿರುವ ಮುತ್ತಿಗೆಯು ಎರಡನೆಯ ದಿನವಾದ ಇಂದೂ ಮುಂದುವರಿಯಿತು.

ಹೊರಕ್ಕೆ ಬಂದು ತಮ್ಮ ಗುಂಪಿನ ಮುಂದೆ ನಿಲ್ಲಬೇಕೆಂದು ರೆಡ್‌ಗಾರ್ಡ್‌ಗಳು  ಇಂದು ಭಾರತದ ರಾಜತಾಂತ್ರಿಕರನ್ನು ಮೂದಲಿಸಿದರು.

ಕಚೇರಿಯ ಗೇಟಿನ ಹೊರಗೆ ಇರುವ ನೂರಾರು ರೆಡ್‌ಗಾರ್ಡ್‌ಗಳು ಮೂದಲಿಕೆಯ ಕೂಗುಗಳನ್ನು ಕೂಗುವುದಲ್ಲದೆ ಕಚೇರಿಯೊಳಕ್ಕೆ ತಾವು ನುಗ್ಗಬಾರದೇಕೆಂದು ಜೋರಾಗಿ ಮಾತನಾಡಿಕೊಳ್ಳುವುದರ ಮೂಲಕ ಆ ಕಚೇರಿಯಲ್ಲಿ ಆಶ್ರಯ ಪಡೆದ 63 ಮಂದಿ ಪುರುಷರು ಮತ್ತು ಮಕ್ಕಳನ್ನು ಬೆದರಿಸಲು ಯತ್ನಿಸಿದಂತೆ ಕಂಡುಬಂದಿತು.

ADVERTISEMENT

ಪೀಕಿಂಗ್‌ನಲ್ಲಿರುವ ಭಾರತದ ಕಚೇರಿಯ ಮೇಲಿನ ದಿಗ್ಬಂಧನ ಕೊನೆಗಾಣಿಸಲು ಒತ್ತಾಯ
ನವದೆಹಲಿ, ಜೂ. 18– ಪೀಕಿಂಗ್‌ನಲ್ಲಿರುವ ಭಾರತ ರಾಯಭಾರಿ ಕಚೇರಿಯ ಮೇಲೆ ಹಾಕಲಾಗಿರುವ ದಿಗ್ಬಂಧನವನ್ನು ಕೊನೆಗಾಣಿಸಲು ಚೀನವು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಭಾರತ ಸರ್ಕಾರವು ಇಂದು ಒತ್ತಾಯ ಮಾಡಿದೆ.

ಚೀನದ ಹೆಚ್. ಬಾಂಬ್ ಸ್ಫೋಟ: ಭಾರತಕ್ಕೆ ಕಳವಳ
ದೆಹಲಿ, ಜೂ. 18–
‘ಅಣುಸ್ಫೋಟಗಳ ಬಗ್ಗೆ ಚೀನಾ ವಿಶ್ವಜನಾಭಿಪ್ರಾಯವನ್ನು ತೀವ್ರವಾಗಿ ಉಲ್ಲಂಘಿಸುತ್ತಲೇ ಇದೆ’ ಎಂಬುದಾಗಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಂದು ಚೀನಾ ಹೈಡ್ರೋಜನ್ ಬಾಂಬ್ ಸ್ಫೋಟದ ಬಗ್ಗೆ ಪ್ರಸ್ತಾಪಿಸುತ್ತಾ ನುಡಿದರು.

ಚೀನಾದ ಈ ಕ್ರಮ ಭಾರತಕ್ಕೆ ಆತಂಕವನ್ನುಂಟು ಮಾಡಿದೆಯೆಂದೂ ಮಿಲಿಟರಿ ಉದ್ದೇಶಗಳಿಗೆ ಅಣು ಬಳಕೆ ಕೂಡದೆಂಬ ವಿಶ್ವ ಅಭಿಪ್ರಾಯವನ್ನು ಉಲ್ಲಂಘಿಸುತ್ತಲೇ ಬರುತ್ತಿದೆಯೆಂದೂ ಅವರು ನುಡಿದರು.

ಮಂಗಳವಾರ ದೆಹಲಿಗೆ ಶ್ರೀ ವಿಜಯ್ ಆಗಮನ
ನವದೆಹಲಿ, ಜೂ. 18–
ಶ್ರೀ ಕೆ. ರಘುನಾಥ್ ಅವರೊಡನೆ ಚೀನದಿಂದ ಉಚ್ಚಾಟಿತರಾದ, ಪೀಕಿಂಗ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ತೃತೀಯ ಕಾರ್ಯದರ್ಶಿ ಶ್ರೀ ಪಿ. ವಿಜಯ್ ಅವರು ಮಂಗಳವಾರ ನವದೆಹಲಿಗೆ ಆಗಮಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.