ಮದ್ರಾಸ್ ಸೆಕೆಂಡರಿ ಶಾಲೆಗಳಲ್ಲಿ ಹಿಂದಿ ಅಭ್ಯಾಸ ರದ್ದು: ಸರ್ಕಾರಿ ಆಜ್ಞೆ
ಮದ್ರಾಸ್, ಜ. 25– ಮದ್ರಾಸಿನ ಸೆಕೆಂಡರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಿಂದಿ ಕಲಿಯಬೇಕಾಗಿಲ್ಲವೆಂದು ರಾಜ್ಯ ಸರ್ಕಾರ ಆಜ್ಞೆಯೊಂದನ್ನು ಹೊರಡಿಸಿದೆ. ಆದರೆ, ಹಿಂದಿ ಯಾರಿಗೆ ಮಾತೃಭಾಷೆಯೋ ಅವರಿಗೆ ಹಿಂದಿಯನ್ನು ಬೋಧಿಸಲಾಗುವುದು.
ಒಡೆದು ಆಳುವ ಸಾಮ್ರಾಜ್ಯವಾದಿ ಪ್ರಯತ್ನ ವ್ಯರ್ಥ ಎಂದು ಕೊಸಿಗಿನ್
ನವದೆಹಲಿ, ಜ. 25– ಸಾಮ್ರಾಜ್ಯವಾದಿಗಳು ಮತ್ತು ವಸಾಹತುಶಾಹಿಗಳ ವಿರುದ್ಧ ಕ್ರಿಯಾತ್ಮಕ ಹೋರಾಟ ನಡೆಸುತ್ತಿರುವ ದೇಶಗಳ ಮಧ್ಯೆ ಇರುವ ಮಧುರ ಬಾಂಧವ್ಯವನ್ನು ಒಡೆಯಲು ಸಾಮ್ರಾಜ್ಯವಾದಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸೋವಿಯತ್ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಆರೋಪಿಸಿದರು.
ಆದರೆ ಅಂಥ ಪ್ರಯತ್ನಗಳು ಯಶಪಡೆಯುವುದು ಸಾಧ್ಯವಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇಟಲಿ ಯುವತಿ ಜತೆ ರಾಜೀವ್ ವಿವಾಹ
ನವದೆಹಲಿ, ಜ. 25– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಹಿರಿಯ ಪುತ್ರ ಶ್ರೀ ರಾಜೀವ್ ಇಟ್ಯಾಲಿಯನ್ ಯುವತಿ ಸೋನಿಯ ಮೈನೋ ಅವರನ್ನು ವಿವಾಹವಾಗಲಿದ್ದಾರೆ.
ಮಿಸ್ ಮೈನೋ ಅವರನ್ನು ವಿವಾಹವಾಗಲಪೇಕ್ಷಿಸಿ 23 ವರ್ಷ ವಯಸ್ಸಿನ ರಾಜೀವ್ ಕಳಿಸಿದ ನೋಟೀಸ್ ನವದೆಹಲಿಯ ಮ್ಯಾಜಿಸ್ಟ್ರೇಟರಿಗೆ ತಲುಪಿದೆ.
ವಿಧ್ಯುಕ್ತ ನಿಶ್ಚಿತಾರ್ಥ ಇನ್ನು ಕೆಲವೇ ದಿನದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ.
ಡಾ. ಕಾರಂತ್, ಡಾ. ಮೋದಿ ಅವರಿಗೆ ಪದ್ಮಭೂಷಣ: ರಾಜ್ಯದ ನಾಲ್ವರಿಗೆ ಪದ್ಮಶ್ರೀ
ನವದೆಹಲಿ, ಜ. 25– ಭಾರತೀಯ ಜನಜೀವನದಲ್ಲಿ ಗಣನೀಯ ಸ್ಥಾನಮಾನ ಪಡೆದ 77 ಮಂದಿ ಪ್ರಖ್ಯಾತ ನಾಗರಿಕರನ್ನು ರಾಷ್ಟ್ರಪತಿಗಳು ಈ ಬಾರಿಯ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಭಾರತದ ಮುಕುಟಪ್ರಾಯ ಪ್ರಶಸ್ತಿ ‘ಭಾರತ ರತ್ನ’ ಈ ವರ್ಷ ಯಾರಿಗೂ ದೊರೆತಿಲ್ಲ. ರಾಜ್ಯದ ಡಾ. ಶಿವರಾಮ ಕಾರಂತ ಮತ್ತು ಡಾ. ಮೋದಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ರಾಜ್ಯಕ್ಕೆ ಸೇರಿದ ಕೆಳಕಂಡವರೂ ಸಹ ‘ಪದ್ಮ ಶ್ರೀ’ ಪ್ರಶಸ್ತಿಗಳಿಸಿದ್ದಾರೆ.
ಸರ್ವಶ್ರೀ ಡಿ.ಆರ್. ಬೇಂದ್ರೆ (ಕವನ), ಡಿ.ಎನ್. ಕೃಷ್ಣಯ್ಯ ಶೆಟ್ಟಿ (ಸಮಾಜ ಸೇವೆ) ಮತ್ತು ಸುಧಾ ವೆಂಕಟ
ಶಿವಾರೆಡ್ಡಿ (ಸಮಾಜ ಸೇವೆ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.