ADVERTISEMENT

ಅಧಿಕಾರಿಗಳ ನಿರ್ಲಕ್ಷ

ಮಂಜೇಶ್‌ ಪಿ.
Published 13 ಅಕ್ಟೋಬರ್ 2014, 19:30 IST
Last Updated 13 ಅಕ್ಟೋಬರ್ 2014, 19:30 IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಚರಕನಹಳ್ಳಿ ವಾರ್ಡ್ ನಂಬರ್‌ 29ರ ವ್ಯಾಪ್ತಿಗೆ ಒಳಪಡುವ ಜ್ಯೋತಿನಗರದ ಸರಸ್ವತಿ ರಸ್ತೆಯ ಪಕ್ಕದಲ್ಲಿರುವ ಜನರು ಪ್ರತಿದಿನ ಭಯದಿಂದ ವಾಸ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಏಕೆಂದರೆ ಈ ರಸ್ತೆಯಲ್ಲಿ ಬಿದ್ದಿರುವ ಕಸ, ಪಾರ್ಥೇನಿಯಂ ಹಾಗೂ ಇನ್ನಿತರ ಗಿಡಗಳು ಬೆಳೆದು ಇದರಿಂದ ಹೆಗ್ಗಣಗಳು, ಹಾವುಗಳು ಅಲ್ಲಲ್ಲಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿವೆ. ಇಲ್ಲಿನ ಮೋರಿಯಲ್ಲಿ ನೀರು ಸರಾಗವಾಗಿ ಹರಿಯಲು ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ಇದರಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಈ ವಿಚಾರವಾಗಿ ಹಲವು ಬಾರಿ ಸ್ಥಳೀಯ ಸಹಾಯಕ ಅಭಿಯಂತರರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ತಿಳಿಸಿದೆವು. ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತಾ ಕಾರ್ಯವನ್ನು ಮಾಡಿಸುವುದಾಗಿ ಆ ಕ್ಷಣಕ್ಕೆ ಭರವಸೆ ಕೊಟ್ಟರಷ್ಟೆ. ಎರಡು ಮೂರು ತಿಂಗಳುಗಳಿಂದ ಇವರ ಉಡಾಫೆ ವರ್ತನೆಯನ್ನು ಕಂಡು ಪಾಲಿಕೆಯ ಐ.ಪಿ.ಪಿ. ಕಂಟ್ರೋಲ್‌ ರೂಂಗೆ ಸೆಪ್ಟೆಂಬರ್ 26ರಂದು ಕರೆ ಮಾಡಿ ದೂರನ್ನು ದಾಖಲಿಸಲಾಗಿದೆ (ದೂರಿನ ಸಂಖ್ಯೆ 157560 ಮತ್ತು 157561). ಇಂದಿನವರೆಗೆ ಸಂಬಂಧಪಟ್ಟ ಯಾರೂ ಇತ್ತ ತಲೆ ಹಾಕಲಿಲ್ಲ.

ಮಹಾಪೌರರು ಹಾಗೂ ಆಯುಕ್ತರರು ಈ ಸಮಸ್ಯೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನರ ಪ್ರಾಣವನ್ನು ಕಾಪಾಡುವರೇ? ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.